ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ : ರಾಜ್ಯದಲ್ಲಿ ಬರುವ ಜೂನ್ 3ರಂದು ನಡೆಯಲಿರುವ ನೈಋತ್ಯ ಪದವೀಧರರ ಮತಕ್ಷೇತ್ರ ವಿಧಾನ ಸಭೆಯ ಚುನಾವಣೆಯಲ್ಲಿ ರಾಜ್ಯ ಸ.ಪ್ರ.ದ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಕಾನೂನು ಸಲಹೆಗಾರರು, ಖ್ಯಾತ ನ್ಯಾಯವಾದಿಗಳು, ಸಂಘಟನಾ ಚತುರರು, ರಾಜ್ಯ ಪದವೀಧರರ ಕಣ್ಮಣಿಯಾದ ಎಸ್.ಪಿ. ದಿನೇಶ ಅವರ ಗೆಲುವು ಖಚಿತ ಎಂದು ರಾಜ್ಯ ಅತಿಥಿ ಉಪನ್ಯಾಸಕ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಆರ್.ಕಲ್ಮನಿ ಹೇಳಿದರು.
ಅವರು ನೈಋತ್ಯ ಪದವೀಧರ ಮತಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿರುವ ಎಸ್.ಪಿ. ದಿನೇಶ್ ಅವರಿಗೆ ರಾಜ್ಯ ಸ.ಪ್ರ.ದ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸಂಪೂರ್ಣ ಬೆಂಬಲ ಘೋಷಿಸಿ, ಶಿವಮೊಗ್ಗ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸೇರಿದಂತೆ ವಿವಿಧ ಸ.ಪ್ರ.ದ ಕಾಲೇಜುಗಳ ಪದವಿಧರರೊಂದಿಗೆ ಭೇಟಿ ಮಾಡಿ, ಎಸ್.ಪಿ ದಿನೇಶ್ ಅವರ ಪರವಾಗಿ ಮತ ಯಾಚಿಸಿ ಮಾತನಾಡಿದರು.
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಚಂದ್ರಶೇಖರ ಕಾಳನ್ನವರ ಮಾತನಾಡಿ, ನೈಋತ್ಯ ಪದವೀಧರ ಮತಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಎಸ್.ಪಿ. ದಿನೇಶ ಅವರು ನಮ್ಮ ಅತಿಥಿ ಉಪನ್ಯಾಸಕರು 45 ದಿನಗಳವರಿಗೆ ನಡೆಸಿದ ಹೋರಾಟದಲ್ಲಿ ಸಂಪೂರ್ಣವಾಗಿ ಭಾಗವಹಿಸುವದರೊಂದಿಗೆ ಅತಿಥಿ ಉಪನ್ಯಾಸಕರ ನೋವುಗಳು, ಸಂಕಷ್ಟಗಳು ಅರಿತುಕೊಂಡವರಾಗಿದ್ದಾರೆ. ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಮತ್ತು ಹೋರಾಟಗಳಿಗೆ ಕಾನೂನಾತ್ಮಕವಾಗಿ ಸಲಹೆ, ಮಾರ್ಗದರ್ಶನ ಮಾಡುತ್ತಿರುವ ಎಸ್.ಪಿ. ದಿನೇಶ ಅವರಿಗೆ ಪದವಿಧರರು ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡುವಂತೆ ಮನವಿ ಮಾಡಿದರು.
ಪ್ರಚಾರದಲ್ಲಿ ಶಿವಮೊಗ್ಗ ಜಿಲ್ಲೆಯ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ರಮೇಶ ಬರ್ಗೆ, ಕೋಶಾಧ್ಯಕ್ಷ ಬಿ.ಕೃಷ್ಣಾರೆಡ್ಡಿ, ಪ್ರೊ. ಮಧು, ಆರ್.ರವಿ, ಡಿ.ಸಿ. ತಳವಾರ, ಬ್ರಿಜೇಶ್, ಎಸ್.ಮಲ್ಲು, ಡಾ. ಕೇಶವ ಬಿ.ಎಸ್ ಸೇರಿದಂತೆ ಹಲವಾರು ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.



