ವಿಜಯಸಾಕ್ಷಿ ಸುದ್ದಿ, ಗದಗ : ಯೋಗವು ಮಾನಸಿಕ, ದೈಹಿಕ ಸಾಮರ್ಥ್ಯದ ಜೊತೆಗೆ ಭಾವನಾತ್ಮಕ ಸಮಚಿತ್ತತೆಯನ್ನು ತಂದುಕೊಡುವ ಅದ್ಭುತ ಮಾರ್ಗ ಎಂದು ಪ್ರಖ್ಯಾತ ಯೋಗಸಾಧಕ ಡಾ.ಸತೀಶ ಹೊಂಬಾಳಿ ಅಭಿಪ್ರಾಯಪಟ್ಟರು.
ನಗರದ ಸನ್ಮಾರ್ಗ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗದ ಮಹತ್ವ ತಿಳಿಸಿ ಅವರು ಮಾತನಾಡಿದರು.
ಸ್ಟುಡೆಂಟ್ ಎಜುಕೇಶನ್ ಸಂಸ್ಥೆಯ ಚೇರಮನ್ ಪ್ರೊ.ರಾಜೇಶ ಕುಲಕರ್ಣಿ ಮಾತನಾಡಿ, ಸಹಸ್ರಾರು ವರ್ಷಗಳ ಭವ್ಯ ಸಂಸ್ಕೃತಿ ಹಾಗೂ ಶ್ರೇಷ್ಠ ಇತಿಹಾಸ ಹೊಂದಿದ ಭಾರತ ಸಮಗ್ರ ಪ್ರಪಂಚಕ್ಕೆ ನೀಡಿದ ಮಹಾನ್ ಕೊಡುಗೆಗಳಲ್ಲಿ ಯೋಗವೂ ಒಂದು. ಪತಂಜಲಿ ಮಹರ್ಷಿಯಿಂದ ಪ್ರಚುರವಾದ ಅಷ್ಟಾಂಗ ಯೋಗ ಕೇವಲ ಆಧ್ಯಾತ್ಮಿಕ ಮೊತ್ತದಲ್ಲಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಮೂಲ ಸೂತ್ರವಾಗಿದೆ ಎಂದರು.
ದಿನಾಚರಣೆಯ ಮಹತ್ವವನ್ನು ತಿಳಿಸುತ್ತ ಪ್ರೊ.ಪ್ರೇಮಾನಂದ ರೋಣದ ಮಾತನಾಡಿ, ಯೋಗವು ನಿಮ್ಮ ಮನಸ್ಸು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿದಿನ ಯೋಗ ಮಾಡುವವರು ಯೋಗದ ಅವಧಿಯ ನಂತರ ಚೈತನ್ಯವನ್ನು ಅನುಭವಿಸುತ್ತಾರಲ್ಲದೇ ಅನಗತ್ಯ ಉದ್ವೇಗ, ಅಶಾಂತಿಯನ್ನು ದೂರಿಕರಿಸಲು ಸಹಾಯ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ನಿರ್ದೇಶಕರಾದ ಪ್ರೊ. ರೋಹಿತ ಒಡೆಯರ್, ಪ್ರೊ. ರಾಹುಲ ಒಡೆಯರ್, ಪ್ರೊ. ಪುನೀತ ದೇಶಪಾಂಡೆ, ಪ್ರೊ. ಸೈಯ್ಯದ್ ಮತಿನ್ ಮುಲ್ಲಾ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಸ್ಥೆ ರೂಪಿಸಿದ ‘ಯೋಗದೀಪಕೆ’ ಎಂಬ ಕಿರುಹೊತ್ತಿಗೆಯನ್ನು ಲೋಕಾರ್ಪಣೆಗೊಳಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮ ನಿರೂಪಣೆ ಹಾಗೂ ಸ್ವಾಗತವನ್ನು ಪ್ರೊ.ರಾಹುಲ ಒಡೆಯರ್ ನಿರ್ವಹಿಸಿದರು. ಪ್ರೊ.ಎಂ.ಪಿ. ಸಂಕನೂರ ವಂದಿಸಿದರು.