ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮನುಷ್ಯ ಸಮಾಜ ಜೀವಿಯಾಗಿದ್ದು, ಹುಟ್ಟಿನಿಂದಲೇ ಸಮಾಜದಿಂದ ಎಲ್ಲವನ್ನೂ ಪಡೆದಿರುವ ಮನುಷ್ಯ ಅವಕಾಶ ಸಿಕ್ಕಾಗೆಲ್ಲ ಸಮಾಜದ ಋಣ ತೀರಿಸುವ ಮನೋಧರ್ಮ ರೂಢಿಸಿಕೊಳ್ಳಬೇಕು. ಆ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಇತ್ತೀಚೆಗೆ ಪಟ್ಟಣದ ಚನ್ನಮ್ಮನ ವನದಲ್ಲಿ ರಾಮಗಿರಿಯ ಬಸಣ್ಣ ಬೆಟಗೇರಿ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ, ಉಪನ್ಯಾಸ, ಸಾಧಕರಿಗೆ ಸಮ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧರ್ಮಾತೀತ, ಜಾತ್ಯಾತೀತವಾಗಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಿದಾಗ ಆ ಸೇವಾಕಾರ್ಯದ ಮೌಲ್ಯ ಹೆಚ್ಚುತ್ತದೆ. ಪ್ರತಿಯೊಬ್ಬ ಮನುಷ್ಯ ತನ್ನ ನಿತ್ಯದ ಆದಾಯದ ಸ್ವಲ್ಪನ್ನಾದರೂ ಬಡವರು, ಅಸಹಾಯಕರು, ಸಮಾಜದ ಸೇವೆಗೆ ಮೀಸಲಾಗಿಸಿದರೆ ಅದು ಸತ್ಫಲವನ್ನೇ ಕೊಡುತ್ತದೆ. ಸಾತ್ವಿಕ ಜೀವಿ, ಸಮಾಜ ಚಿಂತಕ ಬಸಣ್ಣ ಬೇಟಗೇರಿ ಅವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹೀಗೆ ಎಲ್ಲ ಕ್ಷೇತ್ರಗಳ ಬಗ್ಗೆ ಹೊಂದಿರುವ ಗೌರವ ಮತ್ತು ಸಲ್ಲಿಸಿದ ಸಲ್ಲಿಸಿದ ಸೇವಾ ಕಾರ್ಯ ಶ್ಲಾಘನೀಯ. ಅವರ ಕಾರ್ಯ ಮುಂದುವರೆಯಲಿ ಮತ್ತು ಅದು ಸಮಾಜಕ್ಕೆ ಪ್ರೇರಣೆಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಎಂ.ಎ. ರಡ್ಡೇರ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುವದು ಶಿಕ್ಷಕ ಮತ್ತು ಪಾಲಕರ ಸಾಮೂಹಿಕ ಜವಾಬ್ದಾರಿಯಾಗಿದೆ.
ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ, ಆತ್ಮವಿಸ್ವಾಸ ಮೂಡಿಸಬೇಕು. ಅವರಿಗೆ ಪ್ರೇರಣೆ, ಪ್ರೋತ್ಸಾಹ ನೀಡುವುದು ಸಾಧನೆಗೆ ದಾರಿಯಾಗುತ್ತದೆ. ಶಿಕ್ಷಣ ಪ್ರೇಮಿ, ಸಮಾಜ ಜೀವಿ ಬಸಣ್ಣ ಬೆಟಗೇರಿ ಅವರ ಸಮಾಜಮುಖಿ, ಶಿಕ್ಷಣಮುಖಿ ಕಾರ್ಯ ಪ್ರಶಂಸನೀಯ ಎಂದರು.
ಲಕ್ಷ್ಮೇಶ್ವರ ಕರೇವಾಡಿಮಠದ ಶ್ರೀ ಮಳೇಮಲ್ಲಿಕಾರ್ಜುನ ಸ್ವಾಮಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ನಿವೃತ್ತ ಡಿಡಿಪಿಐ ಆಯ್.ಬಿ. ಬೆನಕೊಪ್ಪ `ಸುಸ್ಥಿರ ಸಮಾಜಕ್ಕಾಗಿ ಶಿಕ್ಷಣ’ ವಿಷಯದ ಮೇಲೆ ಉಪನ್ಯಾಸ ನೀಡಿದರು. ಬಿಇಓಗಳಾದ ವಿ.ವಿ. ಸಾಲಿಮಠ, ಎಚ್.ಎಂ. ಪಡ್ನೇಶಿ, ಎಚ್.ಎನ್. ನಾಯಕ, ಬಿ.ಎಸ್. ಹರ್ಲಾಪುರ, ಈಶ್ವರ ಮೆಡ್ಲೇರಿ, ಮಂಜುನಾಥ ಕೊಕ್ಕರಗೊಂದಿ ಸೇರಿ ಹಲವರಿದ್ದರು.
ಸಮಾರಂಭದಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿನ ಕೀರ್ತಿ ಬೆಳಗಿದ ವಿದ್ಯಾರ್ಥಿಗಳಿಗೆ ಪುರಸ್ಕಾರ, ನಗದು ಬಹುಮಾನ ನೀಡಲಾಯಿತು. ಎನ್.ಎನ್. ಶಿಗ್ಲಿ, ಬಿ.ಎಂ. ಕುಂಬಾರ, ಸತೀಶ ಬೋಮಲೆ ನಿರ್ವಹಿಸಿದರು.
ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನನ್ನದೇನು ಕೊಡುಗೆ ಎಂಬ ಆತ್ಮಸಾಕ್ಷಿಯೊಂದಿಗೆ ಸಮಾಜದ ಋಣ ತೀರಿಸಲು ಸದವಕಾಶವನ್ನೇ ದೇವರೇ ನನಗೆ ಕಲ್ಪಿಸಿದ್ದಾನೆ ಎಂಬ ಭಾವನೆಯೊಂದಿಗೆ ತಾಲೂಕಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಸೇವೆ, ಸಾಧಕರು, ಸಮಾಜ ಸೇವರಕರನ್ನು ಗುರುತಿಸಿ ಪ್ರೋತ್ಸಾಹಿಸುವ ಅಳಿಲು ಸೇವೆ ಮಾಡಲು ಸಿಕ್ಕ ಅವಕಾಶ ಸಂತೃಪ್ತಿ ತಂದಿದೆ.
– ಬಸಣ್ಣ ಬೆಟಗೇರಿ.
ಸಮಾಜ ಸೇವಕರು, ಸಮಾಜ ಚಿಂತಕರು.