ವಿಜಯಸಾಕ್ಷಿ ಸುದ್ದಿ, ರೋಣ : ಶಿಕ್ಷಕ ವೃತ್ತಿ ನಿಸ್ವಾರ್ಥತೆಯಿಂದ ಕೂಡಿದ್ದು, ಅತ್ಯಂತ ಪವಿತ್ರವಾಗಿದೆ ಎಂದು ಮುಖಂಡ ಚಂದ್ರು ಮಾರನಬಸರಿ ಹೇಳಿದರು.
ಅವರು ಮಂಗಳವಾರ ಸಂಜೆ ಮಾರನಬಸರಿ ಗ್ರಾಮದ ಸಹಿಪ್ರಾ ಶಾಲೆಗೆ 1 ಲಕ್ಷ ರೂಗಳ ದೇಣಿಗೆ ನೀಡಿದ ನಿವೃತ್ತ ಶಿಕ್ಷಕ ಆರ್.ಬಿ. ಪ್ರಭಣ್ಣವರ ಅವರಿಗೆ ಸನ್ಮಾನ ಹಾಗೂ ಎಂಪಿಎಲ್ ಆಯೋಜಕರಿಂದ ಶಾಲಾ ಮಕ್ಕಳ ಭೋಜನಕ್ಕೆ 100 ತಾಟುಗಳ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಾರನಬಸರಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನೂರಾರು ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿರುವ ಆರ್.ಬಿ. ಪ್ರಭಣ್ಣವರ ತಮ್ಮ ನಿವೃತ್ತಿ ಸಂಧರ್ಭದಲ್ಲಿಯೂ ಸಹ ಗ್ರಾಮದ ಶಾಲಾ ಮಕ್ಕಳ ಉನ್ನತಿಗೆ 1 ಲಕ್ಷ ರೂಗಳ ದೇಣಿಗೆಯನ್ನು ನೀಡಿ ಶಿಕ್ಷಣ ಪ್ರೇಮವನ್ನು ಮೆರೆದಿರುವುದು ಸ್ವಾಗತರ್ಹ.
ವಿದ್ಯಾರ್ಥಿಗಳು ಸಹ ಉತ್ತಮ ಅಕ್ಷರ ಜ್ಞಾನವನ್ನು ಪಡೆದು ಶಾಲೆಯ ಮತ್ತು ಶಿಕ್ಷಕರ ಕಿರ್ತಿಯನ್ನು ಹೆಚ್ಚಿಸಬೇಕು ಎಂದರು.
ಬುದೇಶ ಮೇಟಿ ಮಾತನಾಡಿ, ಗ್ರಾಮದಲ್ಲಿ ಎಂಪಿಎಲ್ ಮಾದರಿ ಕ್ರಿಕೆಟ್ ಟೂರ್ನಿಯನ್ನು ಆಡಿಸಲಾಗಿತ್ತು. ಈ ಸಂಧರ್ಭದಲ್ಲಿ ಉಳಿದ ಹಣದಿಂದ ಶಾಲಾ ಮಕ್ಕಳ ಬಿಸಿಯೂಟಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಎಲ್ಲರೂ ಸೇರಿ 100 ತಾಟುಗಳನ್ನು ದೇಣಿಗೆ ನೀಡಿದ್ದು, ಶಾಲಾ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಗ್ರಾಮದ ಕಿರ್ತಿಯನ್ನು ಹೆಚ್ಚಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಬಸವ ಭೂಷಣ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕ ಸತೀಶ ಹೊರಪೇಟಿರವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಮರ್ತುಜಸಾಬ ಮೋತೆಖಾನ್, ರಿಯಾಜ ಆಲೂರ, ಪ್ರವೀಣ ಸರ್ವಿ, ಪರಶುರಾಮ ಅಬ್ಬಿಗೇರಿ, ಕಿರಣ ದಿಂಡೂರ, ಬಸವರಾಜ ಬಂಡಿ, ಮಂಜುನಾಥ ಚಿತ್ತವಾಡಗಿ, ಸತೀಶ ಭಜಂತ್ರಿ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.



