ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಹೊಸದಾಗಿ ಖರೀದಿಸಿರುವ ಶವವಾಹನ (ಮುಕ್ತಿವಾಹಿನಿ) ಸೇವೆಗೆ ನಿಗದಿಪಡಿಸಿರುವ ₹2,000 ಬಾಡಿಗೆ ಶುಲ್ಕವನ್ನು ಕಡಿಮೆ ಮಾಡಿ ₹500ಕ್ಕೆ ನಿಗದಿಪಡಿಸಬೇಕು ಎಂದು ಸಾರ್ವಜನಿಕರು ಮಂಗಳವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ನಾಗರಾಜ ಚಿಂಚಲಿ, ಈ ಹಿಂದೆ ಬಳಕೆಯಲ್ಲಿದ್ದ ಶವವಾಹನ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ಹೊಸ ವಾಹನ ಖರೀದಿಸಿರುವುದು ಸ್ವಾಗತಾರ್ಹ ಕ್ರಮವಾದರೂ, ಏಕಾಏಕಿ ₹2,000 ಸೇವಾ ಶುಲ್ಕ ನಿಗದಿಪಡಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಭಾರವಾಗಲಿದೆ ಎಂದು ಹೇಳಿದರು.
ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶವವಾಹನದ ಬಾಡಿಗೆ ದರವನ್ನು ₹500ಕ್ಕೆ ನಿಗದಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯಲ್ಲಪ್ಪ ಜಾಲಗಾರ, ಬಸವರಾಜ ದೊಡ್ಡಮನಿ, ಶಿವಣ್ಣ ಕಟಗಿ, ಸದಾನಂದ ನಂದೆಣ್ಣವರ, ಪ್ರಕಾಶ ಕೊಂಚಿಗೇರಿಮಠ, ಟಾಕಪ್ಪ ಸಾತಪೂತೆ, ಎಂ.ಆರ್. ಪಾಟೀಲ, ಅಪ್ಪಣ್ಣ ಮುಳಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.



