ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ನಮ್ಮ ಸುತ್ತಲಿನ ಪ್ರಕೃತಿ, ಪರಿಸರ ಸಂರಕ್ಷಣೆ ಮಾಡುವದರೊಂದಿಗೆ ಪರಿಸರ ಬೆಳೆಸಿ ಸಂರಕ್ಷಿಸುವ ಸ್ವಯಂ ಪ್ರೇರಿತ ಕಾರ್ಯವಾಗಬೇಕು. ಪರಿಸರ ರಕ್ಷಣೆ ಎಂಬುದು ಕೇವಲ ಒಂದು ದಿನದ ಘೋಷಣೆ-ಆಚರಣೆಯಾಗಬಾರದು ಎಂದು ಹರಿಹರದ ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರವೀಣ ಅಚ್ಚಿ ಹೇಳಿದರು.
ಇಲ್ಲಿನ ಜಿ.ಎಫ್. ಉಪನಾಳ ಟ್ರಸ್ಟ್ನ ಶಾಂತಿಧಾಮ ವೃದ್ಧಾಶ್ರಮದಲ್ಲಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರಂತರವಾಗಿ ಪರಿಸರದ ಮೇಲೆ ಶೋಷಣೆ ನಡೆಯುತ್ತಿದ್ದರೆ ಮುಂದಿನ ದಿನಗಳಲ್ಲಿ ಗಾಳಿಯನ್ನು ಸಹ ನಾವು ಹಣಕ್ಕೆ ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ದಿನಗಳು ದೂರವಿಲ್ಲ. ಅದಕ್ಕಾಗಿ ಎಲ್ಲರೂ ಗಿಡಮರಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನದ ಸಂಸ್ಥಾಪಕರಾಗಿರುವ ಪೂಜ್ಯ ಕವಿಗುರುರಾಜ ಗುರೂಜಿ ಅವರು ಎಲ್ಲೆಡೆ ಗಿಡಮರಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದು, ಅವರ ಆಶೀರ್ವಾದದ ಫಲದಿಂದ ಈ ಬಾರಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಹೇಳಿದರು.
ಕೇಂದ್ರ ಕಚೇರಿಯ ನಿರ್ದೇಶಕಿ ಸಂಗೀತಾ ಧರ್ಮಾಯತ್ ಮಾತನಾಡಿ, ಪರಿಸರದಲ್ಲಿ ಗಿಡಮರಗಳ ಅವಶ್ಯಕತೆ ಎಷ್ಟಿದೆ ಎನ್ನುವದು ಈ ವರ್ಷದ ಬಿಸಿಲಿನ ತಾಪಮಾನವನ್ನು ನೋಡಿದಾಗ ಅರಿವಾಗುತ್ತದೆ. ಒಬ್ಬೊಬ್ಬರು ಒಂದೊಂದು ಸಸಿ ನೆಟ್ಟು ಬೆಳೆಸಿದರೆ ನಮ್ಮ ಪರಿಸರ ಪರಿಶುದ್ಧವಾಗುವದರ ಜೊತೆಗೆ ಎಲ್ಲೆಡೆ ಹಸಿರು ವಾತಾವರಣ ಕಂಡು ಬರಲಿದೆ ಎಂದರು.
ಈ ಸಂದರ್ಭಲ್ಲಿ ವೃದ್ಧಾಶ್ರಮ ಟ್ರಸ್ಟ್ನ ಅಧ್ಯಕ್ಷ ಪ್ರಕಾಶ ಉಪನಾಳ, ಉಪಾಧ್ಯಕ್ಷ ಡಿ.ಎಂ. ಪೂಜಾರ, ಮಂಜುಳಾ ಮುಳಗುಂದ, ಲಾವಣ್ಯ ಬಿಂಕದಕಟ್ಟಿ, ವಿಜಯ ಹೊಳ್ಳಿಯವರಮಠ, ವೀರಭದ್ರಗೌಡ್ರ ಪಾಟೀಲ, ಚಂದ್ರು ಚಾವಡಿ, ರಮೇಶ ಉಪನಾಳ, ಚನ್ನಪ್ಪ ಧರ್ಮಾಯತ್ ಸೇರಿದಂತೆ ಅನೇಕರಿದ್ದರು.