ಬೆಂಗಳೂರು:- ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡದ ಹಿನ್ನಲೆ ವಿಧಾನಸಭೆ ಒಳಗಡೆಯೇ ಬಿಜೆಪಿ ಹಾಗೂ ಜೆಡಿಎಸ್ ಅಹೋರಾತ್ರಿ ಧರಣಿ ನಡೆಸಿದೆ. ವಿಧಾನಸೌಧದ ಕಾರಿಡಾರ್ಗಳಲ್ಲಿ ಕುಳಿತು ವಿಠ್ಠಲ ಭಜನೆ ಮಾಡಿದ್ದು, ಈ ವೇಳೆ ವಿಪಕ್ಷ ನಾಯಕ ಆರ್ ಅಶೋಕ ವಾದ್ಯ ಮತ್ತು ಸಿಟಿ ರವಿ ತಾಳಕ್ಕೆ ಶಾಸಕ ಪ್ರಭು ಚವ್ಹಾಣ್ ಹೆಜ್ಜೆ ಹಾಕಿದರು.
ಮುಡಾ ಹಗರಣ ಕುರಿತು ಬಿಜೆಪಿ ಸದಸ್ಯರು ಪ್ರಸ್ತಾಪಿಸಿ ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಚರ್ಚೆಗೆ ಅವಕಾಶ ನೀಡುವಂತೆ ವಿಧಾನ ಸಭೆಯಲ್ಲಿ ಆಗ್ರಹಿಸಿದರು ಆದ್ರೆ, ಇದಕ್ಕೆ ಒಪ್ಪದ ಸ್ಪೀಕರ್, ಚರ್ಚೆಗೆ ತೆಗೆದುಕೊಳ್ಳುವಂಥದ್ದು ಏನಿದೆ ಎಂದು ಪ್ರಶ್ನಿಸಿದರು. ಚರ್ಚೆಗೆ ಅವಕಾಶ ನೀಡಲು ಒಪ್ಪದ ಸ್ಪೀಕರ್ ನಡೆಯಿಂದ ಬಿಜೆಪಿ, ಜೆಡಿಎಸ್ ಸದಸ್ಯರು ಆಕ್ರೋಶಗೊಂಡರು.
ಆದರೂ ಬಿಜೆಪಿ ಆಗ್ರಹಕ್ಕೆ ಮಣಿಯದ ಸ್ಪೀಕರ್, ನ್ಯಾಯಾಂಗ ತನಿಖೆ ನಡೆಯುತ್ತಿದೆ. ಅಲ್ಲಿ ಹೋಗಿ ದಾಖಲೆ ಕೊಡಿ ಎಂದು ಹೇಳಿದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಸದಸ್ಯರು, ಅಲ್ಲಿಗೆ ಹೋಗಿ ದಾಖಲೆ ಕೊಡುವುದಾದರೆ ಸದನ ಏಕೆ ಬೇಕು ಎಂದು ಆಕ್ರೋಶ ಹೊರ ಹಾಕಿದರು. ಬಳಿಕ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪೋಸ್ಟರ್ ಗಳೊಂದಿಗೆ ಸದನದ ಬಾವಿಗೆ ಇಳಿದು ಧರಣಿ ಆರಂಭಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸ್ಪೀಕರ್, ಪೋಸ್ಟರ್ ತಂದರೆ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೇ ಖಾದರ್ ಕೆಪಿಸಿಸಿ ಅಧ್ಯಕ್ಷರಾಗಲು ಲಾಯಕ್ ಎಂದ ವಿಪಕ್ಷ ನಾಯಕ ಅಶೋಕ್ ಗುಡುಗಿದ್ದು, ಸ್ಪೀಕರ್ ಗೆ ಕನ್ನಡ ಅರ್ಥ ಆಗಲ್ಲ, ತುಳುವಿನಲ್ಲಿ ಘೋಷಣೆ ಕೂಗಿ ಎಂದರು.