ವಿಜಯಸಾಕ್ಷಿ ಸುದ್ದಿ, ಗದಗ : ದೇಶದ ಗಡಿ ಕಾಯುವ ಮೂಲಕ ದೇಶವನ್ನು ಸುಭದ್ರಗೊಳಿಸುವಲ್ಲಿ ಸೈನಿಕರ ಪಾತ್ರ ಅಮೂಲ್ಯವಾದದ್ದು. ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ, ನಿರ್ವಹಿಸಿದ ಸೈನಿಕರ ಕಾರ್ಯ ಅನುಪಮವಾದದ್ದು ಎಂದು ಓಂಕಾರೇಶ್ವರ ಮಠದ ಪೂಜ್ಯ ಫಕೀರೇಶ್ವರ ಪಟ್ಟಾಧ್ಯಕ್ಷರು ಹೇಳಿದರು.
ಅವರು ಶುಕ್ರವಾರ ನಗರದ ಕರ್ನಾಟಕ ರಾಜ್ಯ ಗದಗ ಜಿಲ್ಲಾ ನಿವೃತ್ತರ ಸಂಘದ ಕಾರ್ಯಾಲಯದಲ್ಲಿ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಹಾಗೂ ಗದಗ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘದ ಸಹಯೋಗದೊಂದಿಗೆ 25ನೇ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಯುವ ಜನಾಂಗ ಸೇನೆ ಸೇರುವ ಮೂಲಕ ದೇಶದ ಸುರಕ್ಷತೆ ಮತ್ತು ಭದ್ರತೆಗೆ ಮುಂದಾಗಬೇಕು. ಅದಕ್ಕಾಗಿ ಅವರಲ್ಲಿ ದೇಶಾಭಿಮಾನ, ದೇಶಭಕ್ತಿಯನ್ನು ಮೂಡಿಸುವ ಕಾರ್ಯ ಎಲ್ಲ ಹಂತದಲ್ಲೂ ಆಗಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯ ಹಾಗೂ ಜಿಲ್ಲಾ ನಿವೃತ್ತರ ಸಂಘದ ಅಧ್ಯಕ್ಷ ಕೆ.ಎಚ್. ಬೇಲೂರ ಅವರು ಸೈನಿಕರ ಬದುಕು ಮತ್ತು ಕರ್ತವ್ಯಗಳನ್ನು ಬಣ್ಣಿಸಿದರು.
ಅತಿಥಿಗಳಾಗಿ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷರೂ ಹಾಲಿ ಗೌರವ ಅಧ್ಯಕ್ಷರೂ ಆದ ಅಂದಾನಪ್ಪ ಯರಗೇರಿ, ಮಾಜಿ ಮತ್ತು ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘದ ಗೌರವ ಅಧ್ಯಕ್ಷ ವ್ಹಿ.ಎಸ್. ಅಕ್ಕಿ ಆಗಮಿಸಿದ್ದರು. ಬೊಜರಾಜ ಮೊರಬದ ಸ್ವಾಗತಿಸಿದರು. ಸುಧೀರಸಿಂಹ ಘೋರ್ಪಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಕೆ. ಪಾಟೀಲ ನಿರೂಪಿಸಿ ವಂದಿಸಿದರು.
ವೇದಿಕೆಯ ಮೇಲೆ ಉಭಯ ಸಂಘಟನೆಗಳ ಕಾರ್ಯದರ್ಶಿಗಳಾದ ಸಿ.ಜಿ. ಸೊನ್ನದ, ಬಸಯ್ಯ ಹಿರೇಮಠ, ಬೂದಯ್ಯ ಕುಲಕರ್ಣಿ, ವೀರನಾರಿ ಶಿವಲೀಲಾ ಬಾವಿಕಟ್ಟಿ ಉಪಸ್ಥಿತರಿದ್ದರು. ಮಾಜಿ ಯೋಧರು, ಮಾಜಿ ಮತ್ತು ಹಾಲಿ ಪ್ಯಾರಾಮಿಲಿಟರಿ ಯೋಧರು ಹಾಗೂ ವೀರನಾರಿಯರು ಸೇರಿದಂತೆ ಎನ್ಸಿಸಿ ಅಧಿಕಾರಿಗಳು, ಎನ್.ಸಿ.ಸಿ ಕೆಡೆಟ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ, ಮಾಜಿ ಮತ್ತು ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಗದಗ ಜಿಲ್ಲಾ ಅಧ್ಯಕ್ಷ ನಾಗರಾಜ ಕುಂದರಗಿ ಅವರು ಸೈನಿಕರ ಕಾರ್ಯವೈಖರಿಯನ್ನು ವಿವರಿಸಿದರು.
Advertisement