ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಚನ್ನಮ್ಮ ವೃತ್ತದಿಂದ ಪುರ್ತಗೇರಿ ಕ್ರಾಸ್ವರೆಗಿನ ರಾಷ್ಟ್ರೀಯ ಹೆದ್ದಾರಿ-637ರ ಈದ್ಗಾ ಮೈದಾನ ಸೇರಿ ಅಗತ್ಯ ಸ್ಥಳಗಳಲ್ಲಿ ರೊಡ್ ಬ್ರೇಕರ್ಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಬುಧವಾರ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿನ ಭಾನಾಪೂರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ವಾಹನಗಳ ಓಡಾಟದ ವೇಗ ಹೆಚ್ಚಾಗಿರುವ ಪರಿಣಾಮ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪರಿಣಾಮ ಪಟ್ಟಣದಲ್ಲಿನ ರಾಷ್ಟ್ರೀಯ ಹೆದ್ದಾರಿ ದಾಟುವುದು ಎಂದರೆ ಒಂದು ಕ್ಷಣ ಭಯಕ್ಕೆ ದೂಡಿದಂತಾಗುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಮುಖ್ಯ ರಸ್ತೆಯಾಗಿರುವ ಚನ್ನಮ್ಮ ವೃತ್ತದಿಂದ ಹಿಡಿದು ಪುರ್ತಗೇರಿ ಕ್ರಾಸ್ವರೆಗೆ ಇರುವ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಈ ಮಾರ್ಗವಾಗಿ ಸಂಚರಿಸಬೇಕಿದ್ದು, ಎಚ್ಚರಿಕೆ ತಪ್ಪಿದರೆ ಅಪಾಯ ಎದುರಾಗಲಿದೆ ಎಂದ ಪ್ರತಿಭಟನಾಕಾರರು, ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದು, ಅನಿವಾರ್ಯವಾಗಿ ಬೇರೆ ಶಾಲೆಗಳಿಗೆ ಕಳುಹಿಸಲು ಮುಂದಾಗುತ್ತಿದ್ದಾರೆ ಎಂದು ದೂರಿದರು.
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಸಂಚಾರಕ್ಕೆ ತೊಂದರೆಯಾಗಿತ್ತು. ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಪಿಎಸ್ಐ ಸೋಮನಗೌಡ ಗೌಡ್ರ, ಪುರಸಭೆಯ ಸಿ.ಡಿ. ದೊಡ್ಡಮನಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಹೆದ್ದಾರಿಯಲ್ಲಿ ರೋಡ್ ಬ್ರೇಕರ್ಗಳನ್ನು ನಿರ್ಮಿಸುವವರೆಗೆ ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದು ಪಟ್ಟು ಹಿಡಿದರು. ಈ ಬಗ್ಗೆ ಅಧಿಕಾರಿಗಳು ಚರ್ಚಿಸಿ, ಹೆದ್ದಾರಿಯಲ್ಲಿ ರೋಡ್ ಬ್ರೇಕ್ ನಿರ್ಮಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಭೀಮಣ್ಣ ಇಂಗಳೆ, ಶಾಮೀದ ಮಾಲ್ದಾರ, ಬಾಲು ರಾಠೋಡ, ಇಮ್ರಾನ್ ಅತ್ತಾರ, ರಾಜು ಮಾಳೊತ್ತರ, ವೀರೇಶ ಶಿವಸಿಂಪಗೇರ, ಜಗದೀಶ ಮಡಿವಾಳರ, ಮೆಹಬೂಬ ಮುದಗಲ್, ತಿರುಪತಿ ಕುರಿ, ಯಮನೂರ ಗೌಡ್ರ, ಭಾಷೇಸಾಬ ಮುದಗಲ್, ಕಳಕಪ್ಪ ಹಾಳಕೇರಿ ಮುಂತಾದವರಿದ್ದರು.