ವಿಜಯಸಾಕ್ಷಿ ಸುದ್ದಿ, ಗದಗ : ಕಲ್ಕತ್ತಾದ ಆರ್.ಜಿ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಗದಗ ಐಎಂಎ ಶನಿವಾರ ಗದಗ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು.
ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಕೇಂದ್ರ ಸಂಘಟನೆಯ ಕರೆಯ ಮೇರೆಗೆ ಗದಗ ಭಾರತೀಯ ವೈದ್ಯಕೀಯ ಸಂಸ್ಥೆ, ಗದಗ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸಂಘ, ವಿವಿಧ ನರ್ಸಿಂಗ್ ಕಾಲೇಜುಗಳ ಮತ್ತು ವಿವಿಧ ಸಾಮಾಜಿಕ ಸೇವಾ ಸಂಘಟನೆಗಳ ಬೆಂಬಲದೊಂದಿಗೆ ಗದಗ ಐಎಂಎದಿಂದ ಆರಂಭಿಸಿ ಮಹಾತ್ಮಾ ಗಾಂಧಿ ಸರ್ಕಲ್ ಮೂಲಕ ಗದಗ ಜಿಲ್ಲಾಡಳಿತ ಭವನದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಕೈಗೊಂಡಿತು.

ಕರ್ನಾಟಕ ಸೇರಿದಂತೆ ಭಾರತದಾದ್ಯಂತ ವೈದ್ಯರ ಮೇಲೆ, ಆಸ್ಪತೆಯ ಸಿಬ್ಬಂದಿಯ ಮೇಲೆ ಹಲ್ಲೆ, ಕೊಲೆ ಹಾಗೂ ಆಸ್ಪತ್ರೆ-ಉಪಕರಣ, ಪೀಠೋಪಕರಣ ದ್ವಂಸಗೊಳಿಸುವ ದುಷ್ಕರ್ಮಿಗಳ ಕೃತ್ಯ ನಡೆಯುತ್ತಲೇ ಬಂದಿದ್ದು, ಇತ್ತೀಚೆಗೆ ವೈದ್ಯಕೀಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ, ಕೊಲೆ ಮಾಡುವಂತಹ ದುಷ್ಕೃತ್ಯ ನಡೆಸುವ ದೊಡ್ಡ ದೊಡ್ಡ ಜಾಲಗಳೇ ತಲೆ ಎತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ವೈದ್ಯರಾದ ನಾವು ನಮ್ಮ ವೃತ್ತಿಯನ್ನು ಮುಂದುವರೆಸುವದು ಕಷ್ಟ. ಜನರ ಪ್ರಾಣ ಉಳಿಸಬೇಕಾದ ವೈದ್ಯರನ್ನೇ ಅಮಾನುಷವಾಗಿ ಕೊಲೆಗೈದ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕು. ಕಾಯ್ದೆ ಕಾನೂನುಗಳನ್ನು ಇನ್ನಷ್ಟು ಬಲಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗದಗ ಐಎಂಎ ಅಧ್ಯಕ್ಷ ಡಾ. ಜಿ.ಎಸ್. ಪಲ್ಲೇದ, ಕಾರ್ಯದರ್ಶಿ ಡಾ. ಚಂದ್ರಶೇಖರ ಬಳ್ಳಾರಿ, ಪದಾಧಿಕಾರಿಗಳು, ಗದಗ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ಶೃತಿ ಭಾವಿ ಪಾಟೀಲ, ಕಾರ್ಯದರ್ಶಿ ಡಾ. ಅನ್ನಪೂರ್ಣ ಧನ್ನೂರ, ಪದಾಧಿಕಾರಿಗಳು, ಇತರ ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳ ಜೊತೆಗೂಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಗದಗ-ಬೆಟಗೇರಿ ರೋಟರಿ ಕ್ಲಬ್, ಗದಗ-ಬೆಟಗೇರಿ ಲಯನ್ಸ್ ಕ್ಲಬ್, ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ಹಾಗೂ ಮಿಡ್ಡೌನ್ ಕ್ಲಬ್, ಅಕ್ಕನ ಬಳಗ, ಸಿಎಸ್ಐ ನರ್ಸಿಂಗ್ ಕಾಲೇಜ್, ಹಂಚಿನಾಳ ನರ್ಸಿಂಗ್ ಕಾಲೇಜ್, ಸಂಕನೂರ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು, ಫಾರ್ಮಾ ಕಂಪನಿಗಳ ವೈದ್ಯಕೀಯ ಪ್ರತಿನಿಧಿಗಳು ಸೇರಿದಂತೆ ಹಲವಾರು ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು, ವೈದ್ಯರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರುಗಳು ಶನಿವಾರ ಬೆಳಗಿನ 6 ಗಂಟೆಯಿಂದ ರವಿವಾರ ಬೆಳಗಿನ 6 ಗಂಟೆಯವರೆಗೂ ಒಟ್ಟು 24 ಗಂಟೆಗಳನ್ನು ನಿಗದಿಗೊಳಿಸಿ ಎಮರ್ಜೆನ್ಸಿ ಕೇಸ್ಗಳನ್ನು ಹೊರತುಪಡಿಸಿ ಇತರ ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿದ್ದರು.
ರೋಗಿಗಳ ಪ್ರಾಣ ಉಳಿಸಬೇಕಾದ ವೈದ್ಯರುಗಳೇ ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವದು ವಿಪರ್ಯಾಸ. ವೈದ್ಯ ವಿದ್ಯಾರ್ಥಿನಿಯರು, ಮಹಿಳಾ ವೈದ್ಯರು ಸೇರಿದಂತೆ ಸಮಾಜದಲ್ಲಿ ಎಲ್ಲ ರಂಗದಲ್ಲಿ ಉದ್ಯೋಗಸ್ಥ ಮಹಿಳೆಯರ ಸುರಕ್ಷತೆಗೆ, ಭದ್ರತೆಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅಗತ್ಯವಿರುವಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ಸುರಕ್ಷತೆ ಒದಗಿಸಬೇಕು. ಈ ಕುರಿತು ರಾಜ್ಯ ಮತ್ತು ಕೇಂದ್ರ ಸರಕಾರ ಅಗತ್ಯ ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
Advertisement