ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದಲ್ಲಿ ಅಹಿಂದ ವರ್ಗದಿಂದ ನಡೆದ ಪ್ರತಿಭಟನೆಯಲ್ಲಿ ಶಾಸಕ ಜಿ.ಎಸ್. ಪಾಟೀಲರ ಹೇಳಿಕೆಯನ್ನು ಬಿಜೆಪಿಯವರು ತಿರುಚಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶಿವರಾಜ ಘೋರ್ಪಡೆ ಆರೋಪಿಸಿದರು.
ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ನಿಂದ ಗುರುವಾರ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿನ ದುರಾಡಳಿತದಿಂದ ಬೇಸತ್ತಿದ್ದ ಜನತೆ ಕಾಂಗ್ರೆಸ್ನ 136 ಶಾಸಕರನ್ನು ಗೆಲ್ಲಿಸಿ ಆಶೀರ್ವಾದ ಮಾಡಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರವಾದ ಯಶಸ್ವಿ ಆಡಳಿತ ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ 40-45 ವರ್ಷದ ಜನಪರ ಆಡಳಿತಕ್ಕೆ ಕಪ್ಪು ಮಸಿ ಬಳಿಯಲು ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ ಎಂದರು.
ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಸಿದ್ಧವಾಗಿದೆ. ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪ ಮಾಡುವಾಗ ಶಾಸಕರು ಆ ಹೇಳಿಕೆ ಕೊಡಬೇಕಾದರೆ ಜನ ಮೆಚ್ಚಿದ ನಾಯಕನ ಮೇಲೆ ಸುಳ್ಳು ಆರೋಪಗಳ ಮೂಲಕ ಅಸಂವಿಧಾನಕವಾಗಿ ಸರ್ಕಾರ ತೆರವುಗೊಳಿಸಲು ಪ್ರಯತ್ನ ಮಾಡಿದರೆ ರಾಜ್ಯದ ಜನರು, ಯಾವುದೇ ಪಕ್ಷದ ವ್ಯಕ್ತಿಗಳಲ್ಲ, ಸಿದ್ದರಾಮಯ್ಯ ಅಭಿಮಾನಿಗಳು ಸಹಿಸಿಕೊಳ್ಳಲು ಸಾಧ್ಯವಿಲ್ಲ, ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆ ವಿಚಾರ ಪ್ರಸ್ತಾಪ ಮಾಡಿದ್ದಾರೆಯೇ ಹೊರತು ಯಾವುದೇ ಹೇಳಿಕೆ ಕೊಟ್ಟಿಲ್ಲ ಎಂದರು.
ಮುಖಂಡ ಸಿದ್ದಪ್ಪ ಬಂಡಿ ಮಾತನಾಡಿ, ಬಿಜೆಪಿ ನಾಯಕರು ನಮ್ಮ ಶಾಸಕರ ಹೇಳಿಕೆಯನ್ನು ತಿರುಚಿ ಅದನ್ನು ಜನಸಾಮಾನ್ಯರ ತಲೆಯಲ್ಲಿ ತುಂಬುತ್ತಿದ್ದಾರೆ. ವಿಪಕ್ಷಗಳ ನಾಯಕರ ಮೇಲೆ ಇಡಿ, ಸಿಬಿಐ ದಾಳಿ ಮೂಲಕ ಕೇಂದ್ರ ಸರ್ಕಾರ ಅಧಿಕಾರ ದುರಪಯೋಗ ಅತಿಯಾದರೆ ಜನ ದಂಗೆ ಏಳುತ್ತಾರೆ. ನಿಮ್ಮನ್ನು ಹಾಗೆಯೇ ಬಿಡುವದಿಲ್ಲ ಎಂದಿದ್ದಾರೆಯೇ ಹೊರತು ಶಾಸಕರ ವಿಚಾರ ಬೇರೆ ಇಲ್ಲ ಎಂದರು.
ಮುಖಂಡರಾದ ಬಿ.ಎಸ್. ಶೀಲವಂತರ, ಎಚ್.ಎಸ್. ಸೋಂಪುರ ಮಾತನಾಡಿ, ಸಿದ್ದರಾಮಯ್ಯ ಸರ್ಕಾರವನ್ನು ಅಸಂವಿಧಾನಿಕವಾಗಿ ಅಸ್ಥಿರಗೊಳಿಸಲು ಪ್ರಯತ್ನ ನಡೆದರೆ ಜನ ಸುಮ್ಮನಿರುವದಿಲ್ಲ ಎಂದಿದ್ದಾರೆಯೇ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದರು.
ಈ ಸಂದರ್ಭದಲ್ಲಿ ವೀರಣ್ಣ ಶೆಟ್ಟರ, ಮುರ್ತುಜಾ ಡಾಲಾಯತ, ರಾಜು ಸಾಂಗ್ಲೀಕರ, ಪ್ರಕಾಶ ದಿವಾಣದ, ಶರಣು ಪೂಜಾರ, ವೆಂಕಟೇಶ ಮುದಗಲ್, ಪ್ರಶಾಂತ ರಾಠೋಡ, ಬಸು ಚನ್ನಿ, ಸಿದ್ದು ಗೊಂಗಡಶೆಟ್ಟಿಮಠ, ಯಲ್ಲಪ್ಪ ಬಂಕದ, ಅಂದಪ್ಪ ಬಿಚ್ಚೂರ ಇತರರು ಇದ್ದರು.
ಪಟ್ಟಣದ ಕೆ.ಕೆ. ಸರ್ಕಲ್ನಲ್ಲಿ ಬಿಜೆಪಿಯವರು ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಶಾಸಕರು ಮಾತನಾಡುವಾಗ ದರ್ಪದ ಆಡಳಿತ, ಗುಂಡಾ ಆಡಳಿತದ ಬಗ್ಗೆ ಮಾತನಾಡಿದ್ದಾರೆ. ಆದರೆ ಮಾಜಿ ಶಾಸಕರ ಆಡಳಿತದಿಂದ ಬೇಸತ್ತ ಅವರ ಪಕ್ಷದ ಕಾರ್ಯಕರ್ತರು ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಮನೆಯಲ್ಲಿ ಕೂಡಿಸಿದ್ದಾರೆ. ನಮ್ಮ ಶಾಸಕರಿಗೆ ಬುದ್ಧಿ ಹೇಳುವ ನೈತಿಕತೆ ಬಿಜೆಪಿಯವರಿಗಿಲ್ಲ ಎಂದು ಶಿವರಾಜ ಘೋರ್ಪಡೆ ಹೇಳಿದರು.