ಬೆಳಗಾವಿ: ಪಟ್ಟಣ ಪಂಚಾಯಿತಿ ಗದ್ದುಗೆಗಾಗಿ ರಾತ್ರೋರಾತ್ರಿ ಬಿಜೆಪಿ ಸದಸ್ಯನನ್ನೇ ಅಪಹರಣ ಮಾಡಿದ್ದಾರೆಂದು ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಕಾಂಗ್ರೆಸ್ ಮುಖಂಡರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ನಾಗೇಶ ಅಸುಂಡಿ ಅಪಹರಣಕ್ಕೆ ಒಳಗಾದವರಾಗಿದ್ದು, ಅಪರಿಚಿತರಿಂದ ಅಸುಂಡಿ ಕಿಡ್ನಾಪ್ ಮಾಡಲಾಗಿದೆ ಎಂದು ಅವರ ತಂದೆ ಬಸವರಾಜ್ ಕಿತ್ತೂರು ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಾದ ಬೆನ್ನಲ್ಲೇ ಕಿತ್ತೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಸೆಪ್ಟರೆಂಬರ್ 3 ರಂದು ಕಿತ್ತೂರು ಪಟ್ಟಣ ಪಂಚಾಯತಿ ಚುನಾವಣೆ ಇದ್ದು, ಬಿಜೆಪಿ 9, ಕಾಂಗ್ರೆಸ್ ಹಾಗೂ ಪಕ್ಷೇತರ ಸೇರಿ 9 ಸದಸ್ಯರ ಸಂಖ್ಯಾಬಲ ಇದೆ. ಹೀಗಾಗಿ ಸಂಖ್ಯಾಬಲ ಹೆಚ್ಚಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷದವರೇ ಕಿಡ್ನಾಪ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.
ನಾಗರಾಜ್ ಅಪಹರಣ ಸಂಬಂಧ ಕಿತ್ತೂರ ಶಾಸಕ ಬಾಬಾಸಾಹೇಬ್ ಪಾಟೀಲ್ ಆಪ್ತ ಅಶೋಕ ಮಾಳಗಿ, ಬಸವರಾಜ ಸಂಗೊಳ್ಳಿ, ಸುರೇಶ ಕುದರೇಮನಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಾಗರಾಜ್ ತಂದೆ ಗುರುವಾರ ತಡರಾತ್ರಿ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.