ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶನಿವಾರ ಪಟ್ಟಣಕ್ಕೆ ಅನಿರೀಕ್ಷಿತ ಭೇಟಿ ನೀಡಿದರು. ಮದ್ಯಾಹ್ನ ಶಾಸಕ ಡಾ.ಚಂದ್ರು ಲಮಾಣಿ ಅವರ ಬಾಲಾಜಿ ಆಸ್ಪತ್ರೆಗೆ ಆಗಮಿಸಿದ ಜೋಶಿಯವರನ್ನು ಶಾಸಕರು ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ಆಸ್ಪತ್ರೆಯ ಆವರಣದಲ್ಲಿ ಅವರನ್ನು ಕಾರ್ಯಕರ್ತರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ನೇ ಅವಧಿಗೆ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದು, ಉತ್ತಮ ಆಡಳಿತ ನೀಡುತ್ತಿದೆ. ಕೇಂದ್ರ ಸರಕಾರದ ಎಲ್ಲ ನಿರ್ಣಯಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ ಎಂದರು.
ಇನ್ನೂ ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರ ಪತನವಾಗುತ್ತದೆ ಎನ್ನುವ ಇಂಧನ ಸಚಿವ ಕೆ.ಜೆ. ಜಾರ್ಜ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಹ್ಲಾದ ಜೋಶಿ, ಮೊದಲು ತಮ್ಮ ಕಾಂಗ್ರೆಸ್ ಪಕ್ಷದಲ್ಲಿ ಏನಾಗುತ್ತಿದೆ ಎನ್ನುವದನ್ನು ಅರಿತುಕೊಂಡು ಮಾತನಾಡಲಿ. ಆಮೇಲೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಲಿ ಎಂದು ಲೇವಡಿ ಮಾಡಿದರು.
ಮಠಕ್ಕೆ ಭೇಟಿ ನೀಡಿದ ಉದ್ದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀಮಠದಲ್ಲಿ ಹಿರಿಯ ಫಕ್ಕೀರ ಸಿದ್ದರಾಮ ಶ್ರೀಗಳು ಇದ್ದಾರೆ. ಮೊದಲೆಲ್ಲ ಮಠಕ್ಕೆ ಬಂದು ಹೋಗುತ್ತಿದ್ದೆವು,.ಈ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದುತ್ತರಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಕುಂದಗೋಳ ಶಾಸಕ ಎಂ.ಆರ್. ಪಾಟೀಲ್, ರವಿ ದಂಡಿನ, ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ, ಶರಣು ಅಂಗಡಿ, ಶಿರಹಟ್ಟಿ ಮಂಡಳ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಬಸವರಾಜ ಪಲ್ಲೇದ, ಬಸವರಾಜ ಚಕ್ರಸಾಲಿ, ನೀಲಪ್ಪ ಹತ್ತಿ, ಸೋಮೇಶ ಉಪನಾಳ, ಅನಿಲ ಮುಳುಗುಂದ, ಸಂತೋಷ ಜಾವೂರ, ಪ್ರಕಾಶ ಮಾದನೂರ, ಗಿರೀಶ ಚೌರಡ್ಡಿ, ಸೇರಿದಂತೆ ಕಾರ್ಯಕರ್ತರು ಇದ್ದರು.
ಮುಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಸಂವಿಧಾನಬದ್ಧವಾಗಿ ಪ್ರಾಸಿಕ್ಯೂಷನ್ ಅನುಮತಿ ಕೊಟ್ಟಿದ್ದಾರೆ. ಆದರೆ ಅದನ್ನು ಟೀಕೆ ಮಾಡುತ್ತಿರುವ ಕಾಂಗ್ರೆಸ್ನವರು ತನಿಖೆ ಮಾಡಬಾರದು ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ನವರು ಪ್ರತಿಭಟನೆ ಮಾಡುತ್ತಿರುವುದು ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಎಂದು ಆರೋಪಿಸಿದರಲ್ಲದೆ, ಹಿಂದೂ ಸಮಾಜ ಜಾಗೃತರಾಗಿರುವುದರಿಂದ ಭಯಪಟ್ಟು ಸಿದ್ದರಾಮಯ್ಯ ಟೆಂಪಲ್ ರನ್ ನಡೆಸಿದ್ದಾರೆ ಎಂದು ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.