ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪುರಾತನ ಇತಿಹಾಸದ ಮಹತ್ವವಾಗಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವರ ಮಹಾತ್ಮೆ ಅಪಾರವಾಗಿದ್ದು, ಈ ಭಾಗದ ಜಾಗೃತ ದೇವರಾಗಿ ಎಲ್ಲರನ್ನು ಕರುಣಿಸುತ್ತಿರುವ ಸೋಮನಾಥನ ಚರಿತ್ರೆಯನ್ನು ಆಲಿಸುವ ಭಾಗ್ಯ ನಿಮಗೆಲ್ಲ ದೊರೆತಿರುವದು ಪುಣ್ಯದ ಕಾರ್ಯವಾಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ಸೋಮೇಶ್ವರ ದೇವಸ್ಥಾನದ ಪುರಾಣ ಸೇವಾ ಸಮಿತಿ ವತಿಯಿಂದ ಶ್ರಾವಣ ಮಾಸದಲ್ಲಿ ಉಭಯಕವಿ ರಾಘವಾಂಕ ವಿರಚಿತ ಶ್ರೀ ಸೋಮನಾಥ ಚರಿತ್ರ ಪುರಾಣ ಮಂಗಲ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸೋಮೇಶ್ವರ ದೇವಸ್ಥಾನ ಈ ಭಾಗಕ್ಕೆ ಒಂದು ಕಳಶಪ್ರಾಯವಾದ ದೇವರಾಗಿದ್ದು, ಸೋಮನಾಥ ದೇವರ ಮಹಿಮೆ ಸಾವಿರಾರು ವರ್ಷಗಳಿಂದಲೂ ಇಲ್ಲಿ ನೆಲೆನಿಂತಿದೆ. ಅನೇಕ ಪವಾಡಗಳನ್ನು ಇಲ್ಲಿ ಕೇಳಿದ್ದೇವೆ, ಇಂತಹ ಮಹಾಮಹಿಮೆ ಭಗವಂತನ ಪುರಾಣ ಆಲಿಸುವ ಅವಕಾಶ ದೊರಕಿರುವದು ಭಾಗ್ಯವಾಗಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಟಿವ್ಹಿ, ಕಂಪ್ಯೂಟರ್, ಸಿನೇಮಾ ಮಾಧ್ಯಮಗಳ ಪ್ರಭಾವಕ್ಕೊಳಗಾದ ಮನುಷ್ಯ ಖಿನ್ನತೆಯಿಂದ ಬಳಲುತ್ತಾ, ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಧರ್ಮಾಚರಣೆಗಳನ್ನು ಮರೆಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಪ್ರತಿಯೊಬ್ಬ ಮನುಷ್ಯನು ತನ್ನ ಕರ್ತವ್ಯ ಕರ್ಮಾದಿಗಳನ್ನು ಅರಿತು ಧರ್ಮದ ದಾರಿಯಲ್ಲಿ ನಡೆಯುವುದರ ಜೊತೆಗೆ ಮಕ್ಕಳಿಗೂ ಸಂಪ್ರದಾಯ, ಸಂಸ್ಕೃತಿ ಹಾಗೂ ಹಬ್ಬಗಳ ಆಚರಣೆಯ ಮಹತ್ವವನ್ನು ತಿಳಿಸಬೇಕು. ಪುರಾಣ ಪ್ರವಚನಗಳಲ್ಲಿ ತನು, ಮನ, ಧನಗಳಿಂದ ಸೇವೆ ಸಲ್ಲಿಸಿ ಭಗವಂತನ ಕೃಪೆಗೆ ಪಾತ್ರರಾಗಿ ಎಂದು ನುಡಿದರು.
ಸಭೆಯಲ್ಲಿ ಅರ್ಚಕ ಸೋಮಣ್ಣ ಪೂಜಾರ, ಗುರಣ್ಣ ಪಾಟೀಲ ಕುಲಕರ್ಣಿ, ಸುರೇಶ ರಾಚನಾಯ್ಕರ್, ಶಂಕರ ಬಾಳಿಕಾಯಿ, ಬಸವರಾಜ ಮೆಣಸಿನಕಾಯಿ, ನಂದೀಶ ಬಂಡಿವಾಡ, ವಿರೂಪಾಕ್ಷ ಆದಿ, ಬಸನಗೌಡ ಪಾಟೀಲ್, ಚನ್ನಪ್ಪ ಆದಿ, ರಾಜಶೇಖರ ಶಿಗ್ಲಿಮಠ, ಪರಪ್ಪ ಉಮಚಗಿ, ಬಸವರಾಜ ಮೆಣಸಿನಕಾಯಿ, ಮಯೂರ ಪಾಟೀಲ, ನಂದೀಶ ಬಂಡಿವಾಡ, ಸುರೇಶ ಚೌಕನವರ, ಸೇರಿದಂತೆ ಅನೇಕರಿದ್ದರು. ಶಿಕ್ಷಕ ಜಿ.ಎಸ್. ಗುಡಗೇರಿ, ಜಯಪ್ರಕಾಶ ಹೊಟ್ಟಿ, ಸೋಮಶೇಖರ ಕೆರಿಮನಿ, ನಾಗರಾಜ ಕಳಸಾಪುರ, ನಿರ್ವಹಿಸಿದರು. ವಿರೂಪಾಕ್ಷಪ್ಪ ಗವಾಯಿಗಳು ಪುರಾಣ ಪಠಣಗೈದರೆ ಎಸ್.ಎಫ್. ಆದಿ ಪುರಾಣ ಪ್ರವಚನ ಮಾಡಿದರು. ಕಳಕಪ್ಪ ಮುದ್ನಾಪುರ ತಬಲಾ ಸಾಥ್ ನೀಡಿದರು.
ಅತಿಥಿಗಳಾಗಿ ಆಗಮಿಸಿದ ಬಸವೇಶ್ವರ ಮಹಾಂತಶೆಟ್ಟರ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಬದುಕಿನುದ್ದಕ್ಕೂ ದೇವರು, ಧರ್ಮಕಾರ್ಯ, ದಾನ, ದಯೆ ಮತ್ತು ಮಾನವೀಯತೆಗಳನ್ನು ರೂಢಿಸಿಕೊಳ್ಳಬೇಕು ಎಂದರು.