ಬೆಂಗಳೂರು: ನಮ್ಮ ಸರ್ಕಾರ ಬಂದ ಮೇಲೆ ವಿದ್ಯಾಸಿರಿ ಕಾರ್ಯಕ್ರಮ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ವೇಳೆ ತಮ್ಮ ಬಾಲ್ಯದ ನೆನಪು ಮಾಡಿಕೊಂಡ ಸಿಎಂ, ನನಗೆ ಶಿಕ್ಷಕರು ಕಂಡರೆ ಅಪಾರಗೌರವ ಇದೆ. ನನಗೆ ರಾಜಪ್ಪ ಮೇಷ್ಟ್ರು ಕಂಡರೆ ಇಷ್ಟ. ನಾನು 1 ರಿಂದ 4ನೇ ತರಗತಿ ಓದಿರಲಿಲ್ಲ. ರಾಜಪ್ಪ ಮೇಷ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ಸೇರಿಸಿದ್ರು. ಅಂತಹ ಶಿಕ್ಷಕರು ಇರಬೇಕು ಎಂದರು.
ಇನ್ನೂ ನಾನು ಹೈಸ್ಕೂಲ್ಗೆ ಹೋಗೋವರೆಗೂ ಚಪ್ಪಲಿ ಹಾಕಿರಲಿಲ್ಲ. ಬರೀ ಕಾಲಲ್ಲಿ ನಡೆದಿದ್ದೆ. ಇದಕ್ಕಾಗಿ ಸಿಎಂ ಆದ ಮೇಲೆ ಶೂ ಭಾಗ್ಯ ತಂದೆ. ನಮ್ಮ ಸರ್ಕಾರ ಬಂದ ಮೇಲೆ ವಿದ್ಯಾಸಿರಿ ಕಾರ್ಯಕ್ರಮ ಮಾಡಿದೆ. ನಮ್ಮ ಅಪ್ಪ ಹಾಸ್ಟೆಲ್ಗೆ ಸೇರಿಸಿರಲಿಲ್ಲ. ಸಂಬಂಧಿಕರ ಮನೆಯಲ್ಲಿ ಓದುತ್ತಿದ್ದೆ. ನನ್ನ ಅನುಭವದಿಂದ ವಿದ್ಯಾಸಿರಿ ಯೋಜನೆ ಜಾರಿ ಮಾಡಿದೆ. ನಾನು ಇಲ್ಲಿಯವರೆಗೆ ಬರಲು ಶಿಕ್ಷಣ ಕಾರಣ ಮತ್ತು ರಾಜಪ್ಪ ಮೇಷ್ಟ್ರು ಕಾರಣ. ಶಿಕ್ಷಣ ಬಹಳ ಮಹತ್ವದ್ದು. ಶಿಕ್ಷಣ ಅತ್ಯಗತ್ಯ. ಅರಿವು ಮತ್ತು ಜ್ಞಾನ, ಸ್ವಾಭಿಮಾನ, ಜಾತ್ಯಾತೀತ ಭಾವ ಬಂದಾಗ ಮಾತ್ರ ಶಿಕ್ಷಣ ಪಡೆದಿದ್ದು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.