ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾದರೆ ಅವರು ಎಲ್ಲ ವಿಷಯಗಳಲ್ಲಿಯೂ ಪರಿಣಿತರಾಗಿರಬೇಕು. ಹೀಗೆ ಅವರು ಪರಿಣಿತಿ ಸಾಧಿಸುವಲ್ಲಿ ಶಿಕ್ಷಕರ ಪಾತ್ರ ಎಷ್ಟಿದೆಯೋ ಅಷ್ಟೇ ಪಾತ್ರ ಅವರ ತಾಯಂದಿರದ್ದೂ ಇದೆ. ಆದ್ದರಿಂದ ಮಕ್ಕಳ ಅಭ್ಯುದಯದಲ್ಲಿ ತಾಯಂದಿರ ಪಾತ್ರ ಹಿರಿದಾಗಿದೆ ಎಂದು ಶ್ರೀ ಅನ್ನದಾನ ವಿಜಯ ಬಾಲಿಕೆಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಹೇಳಿದರು.
ಪಟ್ಟಣದ ಶ್ರೀ ಅನ್ನದಾನ ವಿಜಯ ಬಾಲಿಕೆಯರ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಈಚೆಗೆ ನಡೆದ ತಾಯಂದಿರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಶಾಲೆಯಲ್ಲಿರುವದಕ್ಕಿಂತ ಹೆಚ್ಚಿನ ಸಮಯ ಮಕ್ಕಳು ಮನೆಯಲ್ಲಿ ನಿಮ್ಮ ಜೊತೆಗೆ ಇರುತ್ತಾರೆ. ಈ ಸಮಯದಲ್ಲಿ ಅವರ ವಿದಾಭ್ಯಾಸಕ್ಕೆ ಯಾವ ತೊಂದರೆಯೂ ಆಗದಂತೆ ಗಮನ ಹರಿಸಬೇಕಿರುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಅವರನ್ನು ಹೆಚ್ಚಾಗಿ ಮನೆ ಕೆಲಸಗಳಿಗೆ ತೊಡಗಿಸದೆ ಅವರು ಚೆನ್ನಾಗಿ ಅಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ನೀವು ನಿಗಾ ವಹಿಸಬೇಕು. ಇದರ ಜೊತಗೆ ಅವರ ಆರೋಗ್ಯದ ಕಡೆಗೂ ಗಮನ ನೀಡಿ ನಿಮ್ಮ ಮಕ್ಕಳು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ರೀತಿಯಿಂದ ಪಾಸಾಗುವಂತೆ ಸಹಕರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿಯ ಚೇರಮನ್ ವೀರಣ್ಣ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕ ಎ.ಟಿ. ಮಳ್ಳೊಳ್ಳಿ ಸ್ವಾಗತಿಸಿದರು. ಶಿಕ್ಷಕ ಬಿ.ಡಿ. ಯರಗೊಪ್ಪ ನಿರೂಪಿಸಿದರು. ಪಾಲಕರ ಪ್ರತಿನಿಧಿ ಮಂಜುಳಾ ಸಂಗನಾಳ, ಶಿಕ್ಷಕಿ ಎಸ್.ಎಫ್. ಧರ್ಮಾಯತ, ಶಿಕ್ಷಕ ಎಂ.ಎಸ್. ಅತ್ತಾರ, ಎಸ್. ಶಿವಮೂರ್ತಿ, ದೈಹಿಕ ಶಿಕ್ಷಕ ಕೆ.ಸಿ. ಜೋಗಿ, ಶಿಕ್ಷಕಿ ಆರ್.ಎಂ. ಗುಳಬಾಳ ವೇದಿಕೆಯ ಮೇಲಿದ್ದರು.
ಶಾಲೆಯ ಹಾಗೂ ನಿಮ್ಮ ಮನೆತನದ ಕೀರ್ತಿಯನ್ನು ಹೆಚ್ಚಿಸುವ ಜವಾಬ್ದಾರಿ ನಿಮ್ಮ ಮಕ್ಕಳ ಮೇಲಿದೆ. ಕಳೆದ ಸಾರೆಯ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಫಲಿತಾಂಶ ನೂರಕ್ಕೆ ನೂರು ಆಗಿದೆ. ಈ ಸಾರೆಯೂ ನಾವು ಅದನ್ನೇ ಬಯಸುತ್ತೇವೆ. ಅದಕ್ಕಾಗಿ ಮಕ್ಕಳ ಪರಿಶ್ರಮ ಮತ್ತು ನಿರಂತರ ಅಧ್ಯಯನ ಅವಶ್ಯಕ ಎಂದು ತಿಳಿಸಿದ ಹೂಲಗೇರಿ, ಅಂತಹ ವಾತಾವರಣವನ್ನು ಮನೆಯಲ್ಲಿ ನೀವುಗಳು ಮಕ್ಕಳಿಗೆ ಒದಗಿಸಿಕೊಡಬೇಕೆಂದರು.