ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಸ್ಥಾಪಿಸಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಾಗಾವಿ ಗ್ರಾಮದ ಬಗರ್ ಹುಕುಂ ಸಾಗುವಳಿ ರೈತರು ಭೂಮಿ ಕಳೆದುಕೊಂಡಿದ್ದು, ರೈತರ ಪರಿಹಾರಕ್ಕಾಗಿ ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ರೈತ ಮುಖಂಡರಾದ ಬಸವಣ್ಣ್ಯಪ್ಪ ಚಿಂಚಲಿ ಹಾಗೂ ಭೂಮಿ ಕಳೆದುಕೊಂಡ ರೈತರು ಹೊರಾಟಕ್ಕೆ ಮುಂದಾಗಿದ್ದಾರೆ. ಇದನ್ನು ಅರಿತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರು ಹಾಗೂ ರೈತ ಮುಖಂಡರೊಂದಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಕಳೆದ ಹಲವು ವರ್ಷಗಳಿಂದ ಪರಿಹಾರ ಸಿಗದೆ ಪರದಾಡುತ್ತಿರುವವರ ಬಗ್ಗೆ ವಿವರಿಸಿ, ಶಾಶ್ವತ ಪರಿಹಾರ ನೀಡಲು ರೈತರ ಪರವಾಗಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೊವಿಂದರೆಡ್ಡಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಡಿ.ವಾಯ್.ಎಸ್.ಪಿ ಇನಾಮದಾರ, ಡಿ.ಎಫ್.ಒ ಲೇಖರಾಜ ಮೀನಾ, ಪಿ.ಎಸ್.ಐ ಜುಲಕಟ್ಟಿ, ನಾಗಾವಿ ಗ್ರಾಮದ ರೈತರಾದ ಶಾಂತವ್ವ ಕಕ್ಕೂರ, ಫೀರೊಜ್ ನದಾಫ್, ಹುಸೇನ್ ಹೊಸಮನಿ, ಮೊಹಮ್ಮದಸಾಬ ಶಲವಡಿ, ಶಿವು ಭಜಂತ್ರಿ, ಟಿಪ್ಪು ಸುಲ್ತಾನ ಬೆಲೆರಿ, ಶಶಿಕಲಾ ಆಮಟೆ, ಮಹಾದೇವಪ್ಪಾ ಬೇವಿನಮರದ, ಧರ್ಮಪ್ಪ ಮಾದರ ಮುಂತಾದವರಿದ್ದರು.
ಇದಕ್ಕೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲರು ಸಭೆಗೆ ಜಿಲ್ಲಾಧಿಕಾರಿಗಳನ್ನು ಕರೆದು ಮಾತನಾಡಿ, ಬಹು ದಿನದ ರೈತರ ಸಮಸ್ಯೆಗಳನ್ನು ಆಲಿಸಿದರು. ಈ ಮೊದಲು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಭರವಸೆ ನೀಡಲಾಗಿತ್ತು ಹಾಗೂ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅದರಂತೆ ಈ ಕೂಡಲೇ ಭೂಮಿ ಕಳೆದುಕೊಂಡ ರೈತರಿಗೆ ಮಾನವೀಯತೆಯ ಆಧಾರದ ಮೇಲೆ, ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
Advertisement