ಬೆಂಗಳೂರು: ನಗರದ ಪ್ರತಿ ಮನೆಗೂ ನೀರು ಪೂರೈಕೆ ಮಾಡೋದು ನಮ್ಮ ಸಂಕಲ್ಪ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 5ನೇ ಹಂತದ ಕಾವೇರಿ ನೀರು ಪೂರೈಕೆ ಯೋಜನೆಯನ್ನು ಉದ್ಘಾಟಿಸಲು ವಿಜಯ ದಶಮಿ ದಿನದಂದು ಸಿದ್ಧತೆ ನಡೆದಿದೆ. ಶುಭ ಗಳಿಗೆಯಲ್ಲಿ ಸಿಎಂ ಸಿದ್ರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಈ ಯೋಜನೆಯಿಂದ ಬೆಂಗಳೂರಿಗೆ 10 ವರ್ಷ ನೀರಿನ ಸಮಸ್ಯೆ ಇರಲ್ಲ. ನಗರದ ಪ್ರತಿ ಮನೆಗೂ ನೀರು ಪೂರೈಕೆ ಮಾಡೋದು ನಮ್ಮ ಸಂಕಲ್ಪ.
ಯಶವಂತಪುರ ಕ್ಷೇತ್ರದಲ್ಲಿ ಯೋಜನೆ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಇದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ. ನಾನು ಕಣ್ಣಾರೆ ನೋಡಲು ಇಲ್ಲಿಗೆ ಬಂದಿದ್ದೇನೆ. ಕಿವಿಯಿಂದ ಕೇಳಿ ಕಾಮಗಾರಿ ಒಪ್ಪಿಗೆ ನೀಡಲ್ಲ. ಇದಕ್ಕಾಗಿ ನಾನಿಲ್ಲಿ ಬಂದಿದ್ದೇನೆ. ಡ್ರೈನೇಜ್ ಸಂಬಂಧಿಸಿದಂತೆ ಸಾವಿರ ಕೋಟಿ ರೂ. ಕಾಮಗಾರಿ ನಡೆಯುತ್ತಿದೆ. ಜೈಕಾ ಜೊತೆ ಸಾಲದ ಒಪ್ಪಂದ ಮಾಡಿಕೊಂಡಿದ್ದೇವೆ. 110 ಕಿ.ಮೀ. ನೀರು ಸರಬರಾಜಿಗೆ 1.45 ಲಕ್ಷ ಮೆಗಾ ಟನ್ ಸ್ಟೀಲ್ ಪೈಪ್ ಬಳಕೆ ಮಾಡಲಾಗಿದೆ ಎಂದಿದ್ದಾರೆ.