ವಿಜಯಸಾಕ್ಷಿ ಸುದ್ದಿ, ರೋಣ : ಕುಡಿಯಲು ನೀರು ಸಿಗುತ್ತಿಲ್ಲ, ಇದೆಂಥಾ ಸ್ಥಿತಿ ಬಂತು ನಮ್ಮೂರಿಗೆ ಎಂದು ಪುರಸಭೆಯ ಸದಸ್ಯೆ ರಂಗವ್ವ ಭಜಂತ್ರಿ ಮುಖ್ಯಾಧಿಕಾರಿ ಆರ್.ಹೊಸಮನಿಯವರನ್ನು ತರಾಟೆಗೆ ತೆಗೆದುಕೊಂಡರು.
ರೋಣ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಕುರಿತು ಈ ವಿಷಯ ಪ್ರಸ್ತಾಪಿಸಿದ ರಂಗವ್ವ ಭಜಂತ್ರಿಯವರು, ನಮ್ಮ ವಾರ್ಡಿನಲ್ಲಿ ಕುಡಿಯಲು ಸಹ ನೀರು ಬಿಡುತ್ತಿಲ್ಲ. ಮುಖ್ಯವಾಗಿ ಕೊಡದಲ್ಲಿ ನೀರು ತುಂಬುವ ಬದಲು ಚರಗಿಯಲ್ಲಿ ನೀರು ತುಂಬುವ ಸ್ಥಿತಿ ಬಂದಿರುವುದು ನಮಗೆ ನಾಚಿಕೆ ತರಿಸಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ಎಂದು ತಾಕೀತು ಮಾಡಿದರು.
ಇದರಿಂದ ವಿಚಲಿತಗೊಂಡ ಮುಖ್ಯಾಧಿಕಾರಿಗಳು ತಕ್ಷಣ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು. ಮಧ್ಯ ಪ್ರವೇಶಿಸಿದ 1ನೇ ವಾರ್ಡಿನ ಸದಸ್ಯ ಮಲ್ಲಯ್ಯ ಮಹಾಪುರುಷಮಠ, ನಮ್ಮ ವಾರ್ಡನ್ನು ಪುರಸಭೆಯು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು ಅಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ.
ಸಿಬ್ಬಂದಿಗಳನ್ನು ಕೇಳಿದರೆ ಸ್ಪಂದಿಸುತ್ತಿಲ್ಲ. ಶೌಚಾಲಯಗಳ ಸ್ಥಿತಿಯಂತೂ ಹೇಳತೀರದು. ಹಿಗಾದರೆ ನಾವು ಜನರಿಗೆ ಯಾವ ಉತ್ತರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ವಿಜಯ ಗಡಗಿ ಮಾತನಾಡಿ, ಪುರಸಭೆಯ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಲ್ಲಿ ವಹಿವಾಟು ನಡೆಸುವ ಮಾಲಿಕರು ಬಾಡಿಗೆ ಕಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು. ಇದರಿಂದ ಗಾಭರಿಗೊಂಡ ಸಿಬ್ಬಂದಿಗಳು ಮಾಹಿತಿ ನೀಡದಿದ್ದಾಗ, ಎಲ್ಲ ಸದಸ್ಯರು ವಿವಿರ ನೀಡಿ ಎಂದು ಒತ್ತಾಯಿಸಿದರು. ಲಕ್ಷಾಂತರ ರೂಗಳ ಬಾಡಿಗೆ ನೀಡದೆ ಹಾಗೆ ಬಿಟ್ಟಿರುವುದು ಕಂಡು ಬಂದಿತು. ಇದರಿಂದ ಆಕ್ರೋಶಗೊಂಡ ಸದಸ್ಯರು ಅವರಿಗೆ ನೋಟಿಸ್ ನೀಡಿ ಬಾಡಿಗೆಯನ್ನು ವಸೂಲಿ ಮಾಡಿ, ಇಲ್ಲ ಸೀಜ್ ಮಾಡಿ ಎಂದರು.
ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಸಂಗನಗೌಡ ಪಾಟೀಲ, ಗದಿಗೇಪ್ಪ ಕಿರೇಸೂರ, ಬಾವಾಸಾಬ ಬೆಟಗೇರಿ, ದಾವಲಸಾಬ ಬಾಡಿನ, ಸಂಗಪ್ಪ ಜಿಡ್ಡಿಬಾಗಿಲ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.