ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಂಚ ಪೀಠಗಳು ವೀರಶೈವ ಧರ್ಮದ ಪ್ರಧಾನ ಕೇಂದ್ರಗಳು. ಈ ಪೀಠಗಳ ಆಚಾರ್ಯರೇ ಈ ಧರ್ಮದ ಜಗದ್ಗುರುಗಳು. ಇವರನ್ನೇ ಪಂಚಾಚಾರ್ಯರೆಂದು ಕರೆಯಲಾಗುತ್ತಿದೆ.
ಪಂಚಾಚಾರ್ಯರನ್ನು ಪೂಜಿಸುವುದೇ ವೀರಶೈವ ಧರ್ಮದ ಪ್ರಥಮ ಕಾರ್ಯ ಎಂದು ರೋಣ ಗುಲಗಂಜಿ ಮಠದ ಶ್ರೀ ಗುರುಪಾದ ಮಹಾಸ್ವಾಮಿಗಳವರು ಹೇಳಿದರು.
ಅಬ್ಬಿಗೇರಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಮೈದಾನದಲ್ಲಿ ಅ. 3ರಿಂದ ಪ್ರಾರಂಭವಾಗಲಿರುವ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ಮುನ್ನಾ ದಿನವಾದ ಅ.2ರಂದು ಪಂಚಾಚಾರ್ಯ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಪುರಾಣಗಳು ಹೇಳುವಂತೆ ಶಿವನಿಗೆ ಅನೇಕ ಪ್ರಮಥ ಗಣಗಳಿವೆ. ಅದರಲ್ಲಿ ರೇಣುಕ, ದಾರುಕ, ಘಂಟಾಕರ್ಣ, ಧೇನುಕರ್ಣ, ವಿಶ್ವ ಕರ್ಣರೆಂಬ ಐವರು ಪ್ರಮಥ ಶಿವಗಣಾಧೀಶರು. ಶಿವನ ಅತ್ಯಂತ ನಿಕಟ ಸ್ವರೂಪರೇ ಆಗಿರುವ ಇವರು ಆಚಾರ್ಯರೆಂದು ಪ್ರಸಿದ್ಧರಾದವರು. ಯಾವುದೇ ಶುಭ ಕಾರ್ಯ ಕೈಗೊಳ್ಳುವಾಗ ಪಂಚಾಚಾರ್ಯರನ್ನು ನೆನೆಯುವುದು ವೀರಶೈವ ಧರ್ಮದ ಸಂಪ್ರದಾಯ ಎಂದು ಶ್ರೀ ಗುರುಪಾದ ಮಹಾಸ್ವಾಮಿಗಳು ಹೇಳಿದರು.
ಈ ಸಂದರ್ಭದಲ್ಲಿ ನರೇಗಲ್ಲದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಯಡಿಯೂರಿನ ರೇಣುಕ ಶಿವಾಚಾರ್ಯರು, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯರು, ನಾಗಠಾಣ-ಸಗರದ ಸೋಮಶೇಖರ ಶಿವಾಚಾರ್ಯರು, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯರು, ಪಾಲಾಕ್ಷಯ್ಯ ಅರಳೆಲೆಮಠ, ಬಸವರಾಜ ಪಲ್ಲೇದ, ಮಂಜುನಾಥ ಅಂಗಡಿ, ರೂಪಾ ಅಂಗಡಿ, ನೀಲಪ್ಪ ದ್ವಾಸಲ, ಎಂ. ಲೋಹಿತ್, ಅಂದಪ್ಪ ವೀರಾಪೂರ, ಬಸವರಾಜ ವೀರಾಪುರ, ಎಂ.ಎಸ್. ಚಿನ್ನೂರ, ಬಿ.ಎಂ. ಹನುಮನಾಳ, ಜಗದೀಶ ಅವರೆಡ್ಡಿ, ಬಿ.ಎಸ್. ಜಗಾಪೂರ, ಮಲ್ಲು ಯಲ್ಲರೆಡ್ಡಿ, ರಾಜು ಬೆಂಗಳೂರಶೆಟ್ಟರ, ಶಿವಲಿಂಗಪ್ಪ ತಿಪ್ಪಶೆಟ್ಟಿ, ಬಾಬು ಬನ್ನಿಕೊಪ್ಪ, ಚಂದ್ರಗೌಡ ಪಾಟೀಲ, ಗಣೇಶ ಶಸ್ತಿçಮಠ, ವಿನಾಯಕ ಜೋಷಿ, ಮಹೇಶ ಹೊಂಬಳ್ಳಿ, ಶಂಕ್ರಪ್ಪ ಹೊಂಬಳ್ಳಿ, ಶಿವಾನಂದ ಗುಗ್ಗರಿ, ಶಂಕ್ರಪ್ಪ ಬ್ಯಾಡಗಿ, ವಿಜಯಕುಮಾರ ಇಟಗಿ, ಬಸವರಾಜ ಜಂತ್ಲಿ, ಮಹಾದೇವಪ್ಪ ಇಟಗಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ನೇತೃತ್ವ ವಹಿಸಿದ್ದ ಸಿದ್ದರಬೆಟ್ಟ ಮತ್ತು ಅಬ್ಬಿಗೇರಿ ಹಿರೇಮಠ ಶ್ರೀ ವೀರಭದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ನಾಡಿನಲ್ಲಿ ಸಾವಿರಾರು ಮಠಗಳಿವೆ, ಪೀಠಗಳಿವೆ. ಇವುಗಳಲ್ಲಿ ವಿಶಿಷ್ಠವಾದ ಪರಂಪರೆ ರಂಭಾಪುರಿ ಪೀಠದ್ದಾಗಿದೆ. ಈ ಪೀಠದ ಪರಂಪರೆಯಂತೆ ಪ್ರತಿ ವರ್ಷ ದಸರೆಯಲ್ಲಿ ಒಂದೊಂದು ಕಡೆ ಗುರುಮನೆ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಾರೆ ಆ ಮಹತ್ಕಾರ್ಯ ಅಬ್ಬಿಗೇರಿ ಮತ್ತು ಸುತ್ತಲಿನ ಭಕ್ತರಿಗೆ ದೊರಕಿದೆ ಎಂದರು.