ಗುರು ಕಾರುಣ್ಯದಿಂದ ಆತ್ಮ ಜ್ಞಾನ ಪ್ರಾಪ್ತಿ : ರಂಭಾಪುರಿ ಶ್ರೀಗಳು

0
2nd Day Ceremony of Sharannavaratri Dasara Dharma Conference
????????????
Spread the love

ವಿಜಯಸಾಕ್ಷಿ ಸುದ್ದಿ, ಅಬ್ಬಿಗೇರಿ : ಮನುಷ್ಯ ಜೀವನದಲ್ಲಿ ಧರ್ಮ, ದೇವರು ಮತ್ತು ಗುರುವನ್ನು ಎಂದಿಗೂ ಮರೆಯಬಾರದು. ರವಿ ಕಿರಣದಿಂದ ಹೂ ಅರಳಿದರೆ, ಗುರು ಕರುಣದಿಂದ ಆತ್ಮ ಜ್ಞಾನ ದೊರಕುತ್ತದೆ. ಜಗತ್ತು ಬೆಳಗಲು ಸೂರ್ಯ ಬೇಕು. ಬದುಕನ್ನು ಬೆಳಗಲು ಗುರು ಬೋಧಾಮೃತ ಅವಶ್ಯಕ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನರೇಗಲ್ಲದ ಅಬ್ಬಿಗೇರಿಯಲ್ಲಿ ಹಮ್ಮಿಕೊಂಡಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 2ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬಾಳಿನ ಗುರಿ ಮುಟ್ಟಿಸಲು ಶ್ರೀ ಗುರುವಿನ ಮಾರ್ಗದರ್ಶನ ಬೇಕು. ಗುರುವಿಲ್ಲದೇ ಅರಿವು, ವಿದ್ಯಾ-ಬುದ್ಧಿ ಸಿದ್ಧಿಸದು. ಸನ್ನಡತೆ, ವಿನಯ, ವಿಧೇಯತೆಗಳು ದೊರಕದು. ತಂದೆ ಮೆಚ್ಚಿದರೆ ಮಗನ ಶ್ರೇಯಸ್ಸು. ಗುರು ಮೆಚ್ಚಿದರೆ ಶಿಷ್ಯನ ಉದ್ಧಾರ ಸಾಧ್ಯ. ಗುರು ಕಾರುಣ್ಯವಿಲ್ಲದೇ ಕರ್ಮ ಕಳಚುವುದಿಲ್ಲ. ಗುರು ದೇವನ ಕರುಣೆ ಕಿರಿದಲ್ಲ. ಆ ಹೃದಯ ಹರಕೆಗೆ ಸರಿ ಸಾಟಿಯಾದುದು ಇನ್ನೊಂದಿಲ್ಲ. ಶ್ರೀ ಗುರು ಪರಶಿವನ ಸಾಕಾರ ರೂಪವೆಂದು ಶಾಸ್ತ್ರಗಳು ಸಾರಿ ಹೇಳುತ್ತವೆ. ಪ್ರಾಪಂಚಿಕ ಸಂಬಂಧಗಳು ಕಾಲಾಂತರದಲ್ಲಿ ಶಿಥಿಲಗೊಳ್ಳುತ್ತವೆ. ಆದರೆ ಗುರು ಶಿಷ್ಯರ ಸಂಬಂಧ ಹಾಗಲ್ಲ. ಚಿರಂತನ ನಿತ್ಯ ನೂತನ ಎಂಬುದನ್ನು ಯಾರೂ ಮರೆಯಬಾರದು ಎಂದರು.
ನೇತೃತ್ವ ವಹಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಮಾತನಾಡಿ, ಸುಖದ ಬದುಕಿಗೆ ಪಯತ್ನ ಬೇಕು. ಸಾಧನೆ ಪ್ರಯತ್ನವಿಲ್ಲದೇ ಉನ್ನತಿ ಸಾಧ್ಯವಿಲ್ಲ. ಬದುಕು ವಿಕಾಸಗೊಳ್ಳಲು ಶ್ರೀ ಗುರುವಿನ ಮಾರ್ಗದರ್ಶನ ಅವಶ್ಯಕವೆಂದರು. ಚಿಕ್ಕಮಗಳೂರು ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಸಿಂಧನೂರು-ಕನ್ನೂರು ಸೋಮನಾಥ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು.
  `ರಂಭಾಪುರಿ ಬೆಳಗು’ ಮಾಸ ಪತ್ರಿಕೆ ಬಿಡುಗಡೆ ಮಾಡಿದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆಂಬುದು ಶ್ರೀ ರಂಭಾಪುರಿ ಜಗದ್ಗುರುಗಳ ಆಶಯವಾಗಿದೆ. ಸಾಮರಸ್ಯ-ಸದ್ಭಾವನೆಗಳನ್ನು ಬೆಳೆಸುವಲ್ಲಿ, ಧರ್ಮ ಸಂವರ್ಧನೆ ಮಾಡುವಲ್ಲಿ ದಸರಾ ಧರ್ಮ ಸಮ್ಮೇಳನದ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಜಗದ್ಗುರುಗಳು ಈ ದಸರಾ ಧರ್ಮ ಸಮ್ಮೇಳನಕ್ಕೆ ಹೊಸ ಸ್ವರೂಪ ನೀಡುತ್ತ ಬಂದಿದ್ದಾರೆ ಎಂದರು.
ಭಂಡಿವಾಡದ ಖ್ಯಾತ ಸಾಹಿತ್ಯ ಸಂಶೋಧಕ ಡಾ. ಅಡಿವೆಪ್ಪ ಸಿ.ವಾಲಿ `ಗುರು ಮಹಿಮೆಯ ಮಹತ್ವ’ ಕುರಿತು ಉಪನ್ಯಾಸ ನೀಡುತ್ತ, ಮನುಷ್ಯನಲ್ಲಿ ಅಡಗಿರುವ ಅಜ್ಞಾನ ಕಳೆಯಲು ಜಗದಲ್ಲಿ ಗುರುವಿನಿಂದ ಮಾತ್ರ ಸಾಧ್ಯ.
ಎಷ್ಟು ಜನ ಮಹಾತ್ಮರು ಆಗಿ ಹೋಗಿದ್ದಾರೆಯೋ ಅವರೆಲ್ಲರ ಜೀವನವನ್ನು ಒಳಹೊಕ್ಕು ನೋಡಿದಾಗ ಅವರೆಲ್ಲರ ಬಾಳಿನ ಬೆಳಕು ಶ್ರೀ ಗುರು ಎಂಬುದು ಸ್ಪಷ್ಟವಾಗುತ್ತದೆ. ವೀರಶೈವ ಧರ್ಮ ಪರಂಪರೆಯಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ರಂಭಾಪುರಿ ಪೀಠ ಪರಂಪರೆಯಲ್ಲಿ ಆಗಿ ಹೋದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಧಾರ್ಮಿಕ ಬೋಧ ಸಾಧನೆಯೊಂದಿಗೆ ಸಾಮಾಜಿಕ ಸತ್ಕಾçಂತಿಗೈದ ಪರಮಾಚಾರ್ಯರು. ನೊಂದವರ ಬಾಳಿಗೆ ಬೆಳಕು ತೋರಿ ಉನ್ನತಿಯ ಮಾರ್ಗ ತೋರಿದವರು. ಶ್ರೀ ರಂಭಾಪುರಿ ಜಗದ್ಗುರುಗಳವರ ದಸರಾ ಧರ್ಮ ಸಮ್ಮೇಳನ ಜನ ಸಮುದಾಯದ ಶ್ರೇಯಸ್ಸಿಗೆ ಪ್ರೇರಕ ಶಕ್ತಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಎಸ್. ಪಾಟೀಲ, ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಟಿ. ಈಶ್ವರ್, ಭಾಗವಹಿಸಿದ್ದರು. ಎಡೆಯೂರು, ನರೇಗಲ್ಲ, ಮಳಲಿ, ಕೆಂಭಾವಿ, ಲಕ್ಷ್ಮೇಶ್ವರ, ದೊಡ್ಡಸಗರ, ವಡ್ಡಟ್ಟಿ, ಸಂಗೊಳ್ಳಿ, ಸವಡಿ ಶ್ರೀಗಳು ವೇದಿಕೆಯಲ್ಲಿದ್ದರು.
ಅಂದಪ್ಪ ವೀರಾಪುರ ಸರ್ವರನ್ನು ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಮಹಿಳಾ ರುದ್ರ ಬಳಗ ಗದಗ ಇವರಿಂದ ಸಂಗೀತ ಮತ್ತು ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆಯಿತು. ಗಜೇಂದ್ರಗಡದ ಚಂಬಣ್ಣ ನಿಂಗಪ್ಪ ಚವಡಿ ಇವರಿಂದ ಅನ್ನ ದಾಸೋಹದ ಸೇವೆ ಜರುಗಿತು.
Advertisement
ಗುರು ಕಾರುಣ್ಯದ ಸಾಗರದಲ್ಲಿ ಮಿಂದು ಮಡಿವಂತನಾದರೆ ಬಾಳು ಬಂಗಾರವಾಗುತ್ತದೆ. ಹಿಂದೆ ಗುರು, ಮುಂದೆ ಗುರಿಯಿದ್ದರೆ ಬಾಳಿನಲ್ಲಿ ಏನೆಲ್ಲವನ್ನು ಸಾಧಿಸಲು ಸಾಧ್ಯವಾಗುತ್ತದೆ. ನವರಾತ್ರಿಯ 2ನೇ ದಿನದಲ್ಲಿ ಬ್ರಹ್ಮಚಾರಿಣಿ ಹೆಸರಿನಲ್ಲಿ ದೇವಿಯನ್ನು ಪೂಜಿಸುತ್ತಾರೆ. ಮನಸ್ಸು, ದೇಹ ಮತ್ತು ಇಂದ್ರಿಯಗಳ ಮೇಲೆ ಪ್ರಭುತ್ವ ಸಾಧಿಸುವುದರಲ್ಲಿ ಶಕ್ತಿ ದೊರಕುತ್ತದೆ. ಕಷ್ಟ ಕಾಲದಲ್ಲಿ ಕೂಡಾ ಮಾನಸಿಕ ಸಮತೋಲನ ಮತ್ತು ಆತ್ಮ ವಿಶ್ವಾಸ ಉಳಿಸಿಕೊಳ್ಳಲು ನೆರವಾಗುತ್ತದೆ.
– ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳು.
ಶ್ರೀ ರಂಭಾಪುರಿ ಪೀಠ, ಬಾಳೆಹೊನ್ನೂರು.
ಗುರುರಕ್ಷೆ
ಬದಾಮಿ ನವಗ್ರಹ ಹಿರೇಮಠದ ಶಿವಪೂಜಿ ಶಿವಾಚಾರ್ಯ ಸ್ವಾಮಿಗಳು, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಹಾಸನ ಜಿವೇನಳ್ಳಿಮಠದ ಸಂಗಮೇಶ್ವರ ಸ್ವಾಮಿಗಳು, ನಾಗವಂದದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಕುಷ್ಟಗಿಯ ಬಸಟ್ಟೆಪ್ಪ ಕುಂಬಳಾವತಿ, ಅಬ್ಬಿಗೇರಿಯ ಪ್ರೊ. ಬಿ.ಎಸ್. ಶಿರೋಳ, ದಾವಣಗೆರೆಯ ಎನ್.ಎ. ಮುರಗೇಶ, ಬೆಂಗಳೂರಿನ ಕೆ.ಬಿ. ಉದಯ,  ಶಿವಮೊಗ್ಗದ ಬಿ.ಮಹಾರುದ್ರಪ್ಪ, ಗದಗ ನಗರದ ಪಾರ್ವತಿದೇವಿ ಶಾಬಾದಿಮಠ, ಅಕ್ಕಮ್ಮ ಗುರುಸ್ವಾಮಿಮಠ, ಪ್ರಶಾಂತ ಶಾಬಾದಿಮಠ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

Spread the love

LEAVE A REPLY

Please enter your comment!
Please enter your name here