ವಿಜಯಸಾಕ್ಷಿ ಸುದ್ದಿ, ಗದಗ : ಯೋಗದಲ್ಲಿ ಪ್ರತಿ ದಿನ ಅಧ್ಯಯನ, ಅಭ್ಯಾಸ, ಆಚರಣೆ ನಿಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿ ದಿನ 1 ಗಂಟೆ ಯೋಗದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಮತ್ತೊಬ್ಬರ ಆನಂದದಲ್ಲಿ ನಮ್ಮ ಆನಂದವನ್ನು ಕಂಡುಕೊಳ್ಳಬೇಕು. ಸರಳ ಯೋಗವನ್ನು ಮರೆಯಬಾರದು ಎಂದು ಅಂತಾರಾಷ್ಟ್ರೀಯ ಯೋಗ ಗುರು, ಕರ್ನಾಟಕ ರಾಜ್ಯ ಪ್ರಭಾರಿಗಳು ಹಾಗೂ ವರಿಷ್ಠರಾದ ಭವರಲಾಲ ಆರ್ಯ ಯೋಗ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಪತಂಜಲಿ ಯೋಗ ಪೀಠ ಹರಿದ್ವಾರ ಆಶ್ರಯದಲ್ಲಿ ಗದಗ ಜಿಲ್ಲಾ ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಕಿಸಾನ ಪಂಚಾಯತ, ಯುವ ಭಾರತ ಸಂಘಟನೆಗಳ ಆಶ್ರಯದಲ್ಲಿ ಹುಲಕೋಟಿ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಸಂಸ್ಥೆಯಲ್ಲಿ 17 ದಿನಗಳ ಕಾಲ ಹಮ್ಮಿಕೊಂಡಿದ್ದ ಯೋಗ ಶಿಕ್ಷಕರ ತರಬೇತಿ ಶಿಬಿರದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಗದಗ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ, ರಾಜ್ಯ ಸಮಿತಿ ಸದಸ್ಯರಾದ ಡಾ. ಎಸ್.ಬಿ. ಹಂದ್ರಾಳ ಮಾತನಾಡಿ, ನಮ್ಮ ಸಾಧನೆಯಿಂದಲೇ ಸದ್ದಾಗಬೇಕು. ನಾನು ನನ್ನಿಂದಲೇ ಎಂಬುದನ್ನು ಬಿಟ್ಟು ಯೋಗದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸೇವೆ ಸಾರ್ಥಕವಾಗುತ್ತದೆ. ಯೋಗವನ್ನು ಜೀವನ ಪದ್ಧತಿಯನ್ನಾಗಿಸಿಕೊಳ್ಳಬೇಕೆಂದು ನುಡಿದರು.
ಪುಣೆಯ ಶಿವಲಿಂಗ ಡೋಳಿ ಹಾಗೂ ರವಿ ಬೊಳಿಕಟ್ಟಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪ್ರಸಾದ ಸೇವೆಯನ್ನು ಮಾಡಿಸಿದ ಕುರ್ತಕೋಟಿ ಗ್ರಾ.ಪಂ ಉಪಾಧ್ಯಕ್ಷರಾದ ಸರೋಜ ಬೂದಪ್ಪ ಅಂಗಡಿ ದಂಪತಿಗಳಿಗೆ ಭವರಲಾಲ ಆರ್ಯರು ಗೌರವ ಸಮರ್ಪಿಸಿದರು.
ಲತಾ ಮನೆ ಪ್ರಾರ್ಥಿಸಿದರು. ಅತಿಥಿಗಳ ಪರಿಚಯವನ್ನು ಜಿಲ್ಲಾ ಖಜಾಂಚಿ ಕೆ.ಎಸ್. ಗುಗ್ಗರಿ ಮಾಡಿದರು. ರವಿ ಹಾಗೂ ಶೋಭಾ ಇವರಿಂದ ಪುಷ್ಪಾರ್ಪಣೆ ಜರುಗಿತು. ಮಹಾಂತೇಶಗೌಡ ಹೆರೂರ ಹಾಗೂ ಯಾದಗಿರಿ, ರಾಯಚೂರದಿಂದ ಆನ್ಲೈನ್ ಮೂಲಕ ಶಿಬಿರದಲ್ಲಿ ಭಾಗಿಯಾದ ಶಿಬಿರಾರ್ಥಿಗಳನ್ನು ಗೌರವಿಸಲಾಯಿತು.
ಮಹಿಳಾ ಪ್ರಭಾರಿಗಳಾದ ಶೋಭಾ ಗುಗ್ಗರಿ ಹಾಗೂ ಆಂಜನೇಶ ಮಾನೆ ಶಿಬಿರದ ಕುರಿತು ಸಾಂದರ್ಭಿಕವಾಗಿ ಮಾತನಾಡಿದರು.
ಗದಗದಲ್ಲಿ ಪತಂಜಲಿಯನ್ನು ಹುಟ್ಟು ಹಾಕಲು ಕಾರಣೀಭೂತರಾದ ಸುನಂದಾ ಭೂಮರಡ್ಡಿಯವರನ್ನುಗೌರವಿಸಲಾಯಿತು. ಸಹಪ್ರಭಾರಿ ಆಂಜನೇಶ ಮಾನೆಯವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆಗೆ ಸಹಕರಿಸಿದರು. ರತ್ನಾ ಬಡಿಗಣ್ಣವರ ಜನಪದ ಗೀತೆ ಹಾಡಿದರು. ವೇದಿಕೆ ಮೇಲೆ ಕಿಸಾನ ಪಂಚಾಯತ ಜಿಲ್ಲಾ ಪ್ರಭಾರಿಗಳಾದ ಪ್ರಮೋದ ಬೆಲಿ ಉಪಸ್ಥಿತರಿದ್ದರು. ನಾಗರತ್ನಾ ಬಡಿಗಣ್ಣವರ ನಿರೂಪಿಸಿದರು. ಬಸಮ್ಮ ಹಡಗಲಿ ವಂದಿಸಿದರು.
ಹುಲಕೋಟಿ ಪ್ರಕೃತಿ ಚಿಕಿತ್ಸಾ ಕೇಂದ್ರ ವೈದ್ಯಾಧಿಕಾರಿ ಡಾ. ಸತೀಶ ಹೊಂಬಾಳಿ ಮಾತನಾಡಿ, ಪಂಚಭೂತಗಳಿಂದಾಗ ನಮ್ಮ ಶರೀರಕ್ಕೆ ಪಂಚಭೂತಗಳಿಂದಲೇ ಚಿಕಿತ್ಸೆ ಆಗಬೇಕು. ಪ್ರಕೃತಿಯೊಂದಿಗೆ ಬದುಕುವುದನ್ನು ಕಡಿಮೆ ಮಾಡಿದ್ದರಿಂದಲೇ ದೀರ್ಘಕಾಲದ ರೋಗಕ್ಕೆ ತುತ್ತಾಗುತ್ತಿದ್ದೇವೆ. ಸುಂದರ ಸರಳ ಜೀವನಕ್ಕೆ ಸಾತ್ವಿಕ ಆಹಾರ ಹಾಗೂ ಕನಿಷ್ಠ 15 ದಿನಕ್ಕೊಮ್ಮೆ ಉಪವಾಸ, 1 ಗಂಟೆ ಕಡ್ಡಾಯ ಯೋಗ, ಪ್ರಾರ್ಥನೆ ಮತ್ತು ಸತ್ಸಂಗ, ಯಾವುದೇ ಚಟಗಳಿಗೆ ದಾಸರಾಗಬಾರದು, ಪ್ರತಿ ದಿನ 10ರಿಂದ 15 ಗ್ಲಾಸ್ ನೀರನ್ನು ಕುಡಿಯಬೇಕು. ಈ 5 ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಜೀವನ ಸುಂದರವಾಗಿರುತ್ತದೆ ಎಂದು ಸಲಹೆ ನೀಡಿದರು.
Advertisement