ವಿಜಯಸಾಕ್ಷಿ ಸುದ್ದಿ, ರೋಣ : ಮಹರ್ಷಿ ವಾಲ್ಮೀಕಿಯವರ ನುಡಿಗಳು ಸಾರ್ವಕಾಲಿಕ. ಅವರು ಹಾಕಿಕೊಟ್ಟಿರುವ ತತ್ವದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಪುರಸಭೆ ಸದಸ್ಯ ಸಂಗನಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ಗುರುಭವನದಲ್ಲಿ ತಾಲೂಕಾ ವಾಲ್ಮೀಕಿ ಸಮುದಾಯದಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವಮಾನವರು ಎಂದಿಗೂ ಮಾನವನ ಒಳಿತನ್ನೇ ಬಯಸಿದ್ದಾರೆ. ಅವರು ಏಕತೆ, ಸಹೋದರತೆ, ಸಹಬಾಳ್ವೆಯನ್ನು ಬೋಧಿಸುವ ಮೂಲಕ ಜಗತ್ತಿನ ಹಿತವನ್ನು ಬಯಸಿದ್ದಾರೆ. ನಾವೆಲ್ಲರೂ ವಾಲ್ಮೀಕಿ ಮಹರ್ಷಿಗಳನ್ನು ದೇವಮಾನವ ಎಂದು ಒಪ್ಪಿಕೊಳ್ಳುತ್ತೇವೆ ಎಂದ ಅವರು, ಸಮಾಜ ಸೇರಿದಂತೆ ಎಲ್ಲರೂ ಅವರ ತತ್ವಗಳನ್ನು ಅಳವಡಿಸಿಕೊಂಡು ಜೀವನ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಿದ್ದಾರೂಢ ಮಠದಿಂದ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿತು.
ಸಾನ್ನಿಧ್ಯವನ್ನು ರಾಜಾ ಅಚ್ಯುತ ನಾಯಕ, ಅಧ್ಯಕ್ಷತೆಯನ್ನು ಬಸವರಾಜ ತಳವಾರ ವಹಿಸಿದ್ದರು. ಡಾ. ಶರಣು ಮುಷ್ಠಿಗೇರಿ ಉಪನ್ಯಾಸ ನೀಡಿದರು.
ತಹಸೀಲ್ದಾರ್ ನಾಗರಾಜ ಕೆ, ಜಿ.ಪಂ ಮಾಜಿ ಅಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಮೋಹನ್ ಹುಲ್ಲಣ್ಣವರ, ಹನಮಂತಪ್ಪ ಹಟ್ಟಿಮನಿ, ಸಂತೋಷ ಕಡಿವಾಲ್, ಲಕ್ಷö್ಮಣ ಗೌಡನ್ನವರ, ಶ್ರೀಧರ ನಾಯಕ, ಕುಮಾರ ಗೌಡನ್ನವರ, ಬಸವಂತಪ್ಪ ತಳವಾರ, ಸಂಜಯ ದೊಡ್ಡಮನಿ, ಪಿ.ಎಚ್. ಕಡಿವಾಲ, ಬಿಇಒ ರುದ್ರಪ್ಪ ಹುರುಳಿ ಸೇರಿದಂತೆ ಸಮಾಜದ ಮುಖಂಡರು, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.