ವಿಜಯಸಾಕ್ಷಿ ಸುದ್ದಿ, ಗದಗ : ಅಯೋಡಿನ್ ಸೇವನೆಯಿಂದ ಅತ್ಯುತ್ತಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಮತ್ತು ದೇಹದ ಶಕ್ತಿ ಉತ್ಪಾದನೆ, ದೇಹದ ಚಯಾಪಚಯ ಕ್ರಿಯೆಯ ನಿಯಂತ್ರಣ ಅತ್ಯುತ್ತಮವಾಗಿರುತ್ತದೆ ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ತಿಳಿಸಿದರು.
ನಗರದ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ 350 ಮಿಲಿಯನ್ ಜನರು ಅಸಮರ್ಪಕ ಅಯೋಡಿನ್ಯುಕ್ತ ಉಪ್ಪನ್ನು ಸೇವಿಸುವುದರಿಂದ ಅಯೋಡಿನ್ ಕೊರತೆಯ ನ್ಯೂನತೆಗೆ ಒಳಗಾಗುವ ಅಪಾಯದಲ್ಲಿದ್ದಾರೆ. ಅದರಲ್ಲಿ 54 ಮಿಲಿಯನ್ ಜನರು ಗಳಗಂಡ ಮತ್ತು 2 ಮಿಲಿಯನ್ ಜನರು ಕ್ರೆಟಿನಿಸಂನಿಂದ ಬಳಲುತ್ತಿದ್ದಾರೆ. ಪ್ರತಿವರ್ಷ 9 ಮಿಲಿಯನ್ ಗರ್ಭಿಣಿಯರು ಹಾಗೂ 8 ಮಿಲಿಯನ್ ನವಜಾತ ಶಿಶುಗಳು ಅಯೋಡಿನ್ ಕೊರತೆಯ ನ್ಯೂನತೆಗೆ ಒಳಗಾಗುವ ಅಪಾಯದಲ್ಲಿದ್ದಾರೆ.
ಅಯೋಡಿನ್ ಕೊರತೆಯು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಯೋಡಿನ್ ಲೋಹೀಯ ಜಾಡಿನ ಅಂಶ, ಥೈರಾಡ್ ಹಾರ್ಮೋನುಗಳ ಪ್ರಮುಖ ಅಂಶವಾಗಿದೆ. ಅಯೋಡಿನ್ ಕೊರತೆಯು ಪ್ರಪಂಚದಲ್ಲಿ ತಡೆಗಟ್ಟಬಹುದಾದ ಮೆದುಳಿನ ಹಾನಿಯ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
WHO ಪ್ರಕಾರ ಪ್ರತಿದಿನ ನಾವು 5 ಗ್ರಾಂ. ಉಪ್ಪನ್ನು ಸೇವಿಸಬಹುದು (1-ಣಜಿ ಕ್ಕಿಂತ ಸ್ವಲ್ಪ ಕಡಿಮೆ) ಪ್ರತಿದಿನ ಅವಶ್ಯವಿರುವ ಅಯೋಡಿನ್ ಪ್ರಮಾಣ ವಯಸ್ಸು ಪ್ರಮಾಣ 0-59 ತಿಂಗಳ 90 ಮೈಕ್ರೋ ಗ್ರಾಂ, 06-12 ವರ್ಷ 120 ಮೈಕ್ರೋ ಗ್ರಾಂ, 12 ವರ್ಷಕ್ಕಿಂತ ಮೇಲ್ಪಟ್ಟ 150 ಮೈಕ್ರೋ ಗ್ರಾಂ, ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು 250 ಮೈಕ್ರೋ ಗ್ರಾಂ ಸೇವಿಸಬಹುದು ಎಂದು ಮಾಹಿತಿ ನೀಡಿದರು.
ಎಪಿಡೆಮಿಯೋಲಾಜಿಸ್ಟ್ ಡಾ. ಪ್ರವೀಣ ನಿಡಗುಂದಿ ಮಾತನಾಡಿ, ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು ಹಾಗೂ ಅಯೋಡಿನ್ ಕೊರತೆಯನ್ನು ತಡೆಗಟ್ಟುವಿಕೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯೋಪಾಧ್ಯಾಯರಾದ ಎಸ್.ವಿ. ಬಂಡಿ ಮಾತನಾಡಿ, ದಿನನಿತ್ಯ ಬಳಕೆಯಾಗುವ ಉಪ್ಪಿನ ಮಹತ್ವ ಹಾಗೂ ಮನೆಯಲ್ಲಿ ಶೇಖರಿಸಿಡಬಹುದಾದ ಹಾಗೂ ಬಳಸುವ ವಿಧಾನವನ್ನು ವಿವರಿಸಿ, ಮಕ್ಕಳಿಗೆ ಪೌಷ್ಠಿಕ ಆಹಾರದ ಜೊತೆಗೆ ಅಯೋಡಿನ್ಯುಕ್ತ ಉಪ್ಪನ್ನು ದಿನಂಪ್ರತಿ ಸೇವಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್.ಹೆಚ್. ಮೋನೆ, ಯು.ಎಸ್. ನಿಪ್ಪಾಣಿಕರ, ಗೀತಾ ಹನುಮಂತಗೌಡ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು/ಸಿಬ್ಬಂದಿಯವರು ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಮ್.ಎಸ್. ರಬ್ಬನಗೌಡ್ರ ನಿರೂಪಿಸಿ ವಂದಿಸಿದರು.
ದಿನನಿತ್ಯದ ಆಹಾರದಲ್ಲಿ ಅಯೋಡಿನ್ಯುಕ್ತ ಉಪ್ಪನೇ ಬಳಸುವುದು, ಉಪ್ಪು ಹಾಕಿದ ಡಬ್ಬಿಗಳನ್ನು/ಭರಣಿಗಳನ್ನು ಸರಿಯಾಗಿ ಮುಚ್ಚಳ ಹಾಕಿಡುವುದು, ಆಹಾರವನ್ನು ತಯಾರಿಸಿದ ನಂತರ ಉಪ್ಪನ್ನು ಆಹಾರಕ್ಕೆ ಸೇರಿಸುವುದು, ಪಡಿತರ ಅಂಗಡಿ ಮಾಲಿಕರಿಗೆ ಅಯೋಡಿನ್ ಮಹತ್ವವನ್ನು ತಿಳಿಸಬೇಕು ಮತ್ತು ಅಯೋಡಿನ್ಯುಕ್ತ ಉಪ್ಪನ್ನು ಮಾರಾಟ ಮಾಡಲು ತಿಳಿಸಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಅಯೋಡಿನ್ ಮಹತ್ವದ ಕುರಿತು ಆರೋಗ್ಯ ಶಿಕ್ಷಣ ನೀಡಬೇಕು. ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳ ಶಿಕ್ಷಕರಿಗೆ ಮಕ್ಕಳಿಗೆ ಆರಂಭಿಕ ಜಾಗೃತಿ ಮತ್ತು ಪೋಷಣೆ ಇರುವುದರಿಂದ ಅಯೋಡಿನ್ ಮಹತ್ವದ ಕುರಿತು ಆರೋಗ್ಯ ಶಿಕ್ಷಣ ನೀಡಬೇಕು ಎಂದು ಡಾ. ಪ್ರವೀಣ ನಿಡಗುಂದಿ ತಿಳಿಸಿದರು.