ವಿಜಯಸಾಕ್ಷಿ ಸುದ್ದಿ, ಗದಗ : ಇಂದಿನ ಯುವ ಪೀಳಿಗೆ ಪೂಜ್ಯ ಸಿದ್ಧಲಿಂಗ ಶ್ರೀಗಳ ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯದ ಆದರ್ಶಗಳನ್ನು ಪಾಲಿಸಿ, ಮೌಲ್ಯಯುತ ಗುಣ ಮತ್ತು ಉತ್ತಮ ನಡುವಳಿಕೆಗಳನ್ನು ಬೆಳೆಸಿಕೊಂಡು ಸಮಾಜದ ಆಸ್ತಿಯಾಗಿ ಮತ್ತೊಬ್ಬರಿಗೆ ಪ್ರೇರಣೆಯಾಗಬೇಕೆಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ಕಿವಿಮಾತು ಹೇಳಿದರು.
ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪೂಜ್ಯ ಲಿಂ. ಸಿದ್ಧಲಿಂಗ ಶ್ರೀಗಳ 6ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟ್ರೀಯ ಪ್ರಶಸ್ತಿ ಪುರಷ್ಕೃತರಾದ ಎಸ್.ಎನ್. ಬಳ್ಳಾರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇತಿಹಾಸ ಮರೆತವರು ಇತಿಹಾಸ ಬರೆಯಲಾರರು ಎಂಬಂತೆ ಪೂಜ್ಯ ಲಿಂ. ಸಿದ್ಧಲಿಂಗ ಶ್ರೀಗಳ ಸಮಾನತೆಯ ಅಂತಃಕರಣವನ್ನು ಅರಿತುಕೊಳ್ಳಲು ಪ್ರತಿಯೊಬ್ಬರೂ ಪೂಜ್ಯರ ಜೀವನ ಸಾಧನೆಗಳ ಇತಿಹಾಸವನ್ನು ಓದಬೇಕು. ಏಕೆಂದರೆ ಪೂಜ್ಯರು ಸಮಾತೆಯ ಹರಿಕಾರರಾಗಿದ್ದರು. ಒಂದು ಕಾಲಘಟ್ಟದಲ್ಲಿ ಕೆಳವರ್ಗದವರನ್ನು ಸಾಮಾಜಿಕ ಅನ್ಯಾಯಕ್ಕೆ ಒಳಪಡಿಸಿ ಎಲ್ಲ ಅವಕಾಶಗಳಿಂದ ವಂಚಿತರನ್ನಾಗಿಸಿದ್ದರು. ಅಂತಹ ಸಂದರ್ಭದಲ್ಲಿ ಶೋಷಿತರ ಆಶಾ ಕಿರಣವಾಗಿ ಬಸವಾದಿ ಶರಣರು ಸಕಲರಿಗೂ ಲೇಸನ್ನೇ ಬಯಸಿ ಸಮಾನತೆಯ ಸಮಾಜವನ್ನು ನಿರ್ಮಿಸಿದರು.
ಅದೇ ಹಾದಿಯಲ್ಲಿ ನಡೆದ ಅಂಬೇಡ್ಕರ ಅವರು ಸಂವಿಧಾನ ನಿರ್ಮಿಸಿ ಶೋಷಿತರ ಧ್ವನಿಯಾದರು. ಹೀಗೆ ಬಸವ, ಬುದ್ಧ, ಅಂಬೇಡ್ಕರರ ಆದರ್ಶಗಳನ್ನು ಪಾಲಿಸಿ ಗುರು ಪರಂಪರೆಗೆ ಶ್ರೇಷ್ಠತೆ ತಂದುಕೊಟ್ಟ ಸಿದ್ಧಲಿಂಗ ಶ್ರೀಗಳು ಅಂತಹ ಮಹನೀಯರ ಸಾಲಿಗೆ ಸೇರಿದವರೆಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಬಸವಣ್ಣನವರು ಸಮಾನತೆಯಿಲ್ಲದ ಸಂಪ್ರದಾಯ ಮತ್ತು ಧರ್ಮ ಬೇಡವೆಂದು ತಿರಸ್ಕರಿಸಿ ಸಮಾನತೆಯ ಹೊಸ ಸಮಾಜದ ನಿರ್ಮಾಣದ ಕನಸು ಕಂಡು ಸಾಕಾರಗೊಳಿಸಿದರು ಎಂದರು.
ವೇದಿಕೆಯ ಮೇಲೆ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶೆಖಣ್ಣ ಕಳಸಾಪೂರಶೆಟ್ಟರ, ಮೋಹನ ಆಲಮೇಲಕರ, ವಿದ್ಯಾಧರ ದೊಡ್ಡಮನಿ, ಬಲರಾಮ ಬಸವಾ, ಸಿದ್ಧಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು.
ರೂಪಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಎಂ.ಎಂ. ಬುರಡಿಯವರು ಸ್ವಾಗತಿಸಿ ಪರಿಚಯಿಸಿದರು. ಪ್ರೊ. ಕೆ.ವಿ ಬಾಗಲಕೋಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಸವಾದಿ ಶರಣರ ಆದರ್ಶಗಳ ಸಾಕಾರ ಮೂರ್ತಿಯಾಗಿದ್ದ ಸಿದ್ಧಲಿಂಗ ಶ್ರೀಗಳು ಸರಳ ಮತ್ತು ಸಮಾಜಮುಖಿ ಜೀವನ ನಡೆಸಿ ಸರ್ವ ಧರ್ಮೀಯರನ್ನು ಪ್ರೀತಿಯಿಂದ ಕಂಡು ಭಾವೈಕ್ಯತೆಯ ಹರಿಕಾರರಾಗಿದ್ದರು. ವಿದ್ಯಾರ್ಥಿಗಳು ಪೂಜ್ಯರ ಆದರ್ಶಗಳನ್ನು ಅಳವಡಿಸಿಕೊಂಡು ಸ್ಪರ್ಧಾತ್ಮಕ ವಿಷಯಗಳಲ್ಲಿ ಭಾಗವಹಿಸಿ ಉತ್ತಮ ಫಲಿತಾಂಶ ಮತ್ತು ವ್ಯಕ್ತಿತ್ವ ಹೊಂದಬೇಕೆಂದು ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.