ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಅನ್ನ ನೀಡುವ ಅಕ್ಷಯ ಪಾತ್ರೆಯಾಗಿದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಚೇರಮನ್ ಹಾಗೂ ವಕೀಲರಾದ ಎಂ.ಎಚ್. ಕೋಲಕಾರ ಹೇಳಿದರು.
ನಗರದ ಅಂಜುಮನ್ ಇಸ್ಲಾಂ ಕಮಿಟಿಯ ಅಂಜುಮನ್ ಕಾನ್ವೆಂಟ್ ಸ್ಕೂಲ್ನಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಕನ್ನಡವನ್ನು ಉಳಿಸಿ, ಬೆಳೆಸಲು ಕವಿಗಳು, ಸಂತರು, ಶರಣರು, ಕನ್ನಡ ಪರ ಸಂಘಟನೆಯವರು, ಸರ್ಕಾರ ಎಲ್ಲರೂ ಶ್ರಮಿಸಿದ್ದಾರೆ. ಕನ್ನಡದ ಬಗೆಗೆ ಅಪಾರ ಅಭಿಮಾನ, ಪ್ರೀತಿ, ಕಾಳಜಿಯಿಂದ ಕನ್ನಡವನ್ನ ಎಲ್ಲಾ ಕಡೆ ಬೆಳೆಸಬೇಕು. ಯುವ ಜನಾಂಗ, ವಿದ್ಯಾರ್ಥಿ ಸಮೂಹ ಆ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕಿದೆ ಎಂದರು.
ಅಂಜುಮನ್ ಇಸ್ಲಾಂ ಕಮಿಟಿ ನಿರ್ದೇಶಕ ದಾವಲಸಾಬ ತಾಳಿಕೋಟಿ ಮಾತನಾಡಿ, ಸುಮಾರು 2,500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡವು ಎಲ್ಲ ಭಾಷೆಗಳ ತಾಯಿ ಬೇರು. ವಿದ್ಯಾರ್ಥಿಗಳು ತಾಯಿ ನುಡಿ, ಕನ್ನಡ ಭಾಷೆಯನ್ನು ಎಂದಿಗೂ ಮರೆಯಬಾರದು. ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಕೆಲಸ ಕನ್ನಡಿಗರಾದ ನಾವೆಲ್ಲರೂ ಮಾಡಬೇಕು ಎಂದರು.
ಈ ವೇಳೆ ಅಂಜುಮನ್ ಇಸ್ಲಾಂ ಕಮಿಟಿ ಕಾರ್ಯದರ್ಶಿ ಫಯಾಜ್ ತೋಟದ, ನಿರ್ದೇಶಕ ನಾಸೀರ ಸುರಪುರ, ಮಾಸುಮಲಿ ಮದಗಾರ, ಮುಖ್ಯ ಶಿಕ್ಷಕಿ ಮಾಜನಬಿ ಹಣಗಿ, ಫಾತೀಮ ಕಡ್ಲಿಮಟ್ಟಿ ಇದ್ದರು.