ವಿಜಯಸಾಕ್ಷಿ ಸುದ್ದಿ, ಗದಗ : ಭೀಷ್ಮ ಕೆರೆಯಿಂದ ನಗರದ ಸೌಂದರ್ಯ ಜೊತೆಗೆ ನಗರದ ಅಂರ್ತಜಲ ಹೆಚ್ಚಾಗಿ ಜನರಿಗೆ ನೆಮ್ಮದಿಯನ್ನು ತಂದಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಭೀಷ್ಮ ಕೆರೆಯ ದಂಡೆಯ ಮೇಲೆ ಜಿಲ್ಲಾಡಳಿತ, ನಗರಸಭೆ ಸಂಯುಕ್ತ ಆಶ್ರಯದಲ್ಲಿ ರವಿವಾರ ಏರ್ಪಡಿಸಿದ್ದ ಭೀಷ್ಮ ಕೆರೆಯ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ವಧರ್ಮದ ಪೂಜ್ಯರು ಪಾಲ್ಗೊಂಡಿದ್ದರಿಂದ ಪೂಜೆಯ ವಿಶೇಷತೆ ಹೆಚ್ಚಾಗಿದೆ. ಗದಗಿನ ಅಂತರ್ಜಲವನ್ನು ಹೆಚ್ಚಿಸಿರುವ ಜಲ ಸಂಗ್ರಹ ಎಲ್ಲರಿಗೂ ಸಮಾಧಾನ, ನೆಮ್ಮದಿ ಮತ್ತು ಅನುಕೂಲವನ್ನು ಒದಗಿಸಿದೆ. 70 ಕಿ.ಮೀ ದೂರದ ತುಂಗಭದ್ರ ನದಿಯಿಂದ ನೀರನ್ನು ತಂದು ಭೀಷ್ಮ ಕೆರೆಯನ್ನು ತುಂಬಿಸಿ ಈ ಪ್ರದೇಶದ ಜನರಿಗೆ ಅನುಕೂಲಕ್ಕಾಗಿ ನಿರ್ಮಿಸಿದ ಕೆರೆಯೂ ಇಂದು ತುಂಬಿದ್ದಕ್ಕೆ ಬಾಗಿನ ಅರ್ಪಿಸಿದ್ದೇವೆ. ಹೀಗೆಯೇ ಸದಾಕಾಲ ಭೀಷ್ಮ ಕೆರೆ ತುಂಬಿ ನಗರದ ಜನರನ್ನು ಆಶೀರ್ವದಿಸಲಿ ಎಂದು ಪಾರ್ಥಿಸಿದರು.
ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನೀರು ಮನುಷ್ಯನಿಗೆ ಅತ್ಯಂತ ಪ್ರಮುಖವಾಗಿದೆ. ಪಂಚಭೂತಗಳಾದ ಅಗ್ನಿ, ಭೂಮಿ, ವಾಯು, ಆಕಾಶ, ನೀರಿನಿಂದ ಮಾನವ ಶರೀರ ನಿರ್ಮಿತವಾಗಿದ್ದನ್ನು ನಮ್ಮ ಹಿರಿಯರು ಗಮನಿಸಿ ಪಂಚಭೂತಗಳಿಗೆ ಪ್ರಾರಭದಿಂದಲೂ ಗೌರವವನ್ನು ನೀಡಿದ್ದಾರೆ. ನೀರು ಅತ್ಯಂತ ಪವಿತ್ರವಾದದ್ದು. ಭೀಷ್ಮ ಕೆರೆಯು ಗದಗ ನಗರದ ಜನರ ನೀರಿನ ದಾಹವನ್ನು ತಣಿಸಿರುವ ಜೀವನಾಡಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಧರ್ಮದ ಗುರುಗಳು, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕೆಡಿಪಿ ಸದಸ್ಯ ಡಿ.ಆರ್. ಪಾಟೀಲ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಎಸ್.ಎನ್. ಬಳ್ಳಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೇರಿದಂತೆ ಹಲವರು ಹಾಜರಿದ್ದರು. ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೋತದಾರ ಕಾರ್ಯಕ್ರಮ ನಿರ್ವಹಿಸಿದರು.
ದೂರದ ತುಂಗಭದ್ರ ನದಿಯಿಂದ ಭೀಷ್ಮ ಕೆರೆಗೆ ನೀರನ್ನು ತಂದು ಮಹತ್ವಪೂರ್ಣ ಸಾಧನೆ ಮಾಡಿ ಈ ಪ್ರದೇಶದ ಜನರಿಗೆ ಅನುಕೂಲ ಮಾಡಿರುವ ಸಚಿವ ಎಚ್.ಕೆ. ಪಾಟೀಲ ಅವರು ಅಭಿನವ ಭಗೀರಥರಾಗಿದ್ದಾರೆ. ಭೀಷ್ಮ ಕೆರೆಯಿಂದ ಅಂರ್ತಜಲ ಸಮೃದ್ಧಿ ಆಗುವುದರ ಜೊತೆಗೆ ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸಿದ್ದು ವಿಶೇಷ. ಇಲ್ಲಿನ ಭವ್ಯ ಬಸವೇಶ್ವರ ಮೂರ್ತಿಯನ್ನು ಕಣ್ತುಂಬಿಕೊಂಡು ಭೀಷ್ಮ ಕೆರೆಯಲ್ಲಿ ಬೋಟಿಂಗ್ ಮೂಲಕ ಜಲವಿಹಾರ ಮಾಡಿ ಆನಂದಿಸುತ್ತಿದ್ದಾರೆ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.