ವಿಜಯಸಾಕ್ಷಿ ಸುದ್ದಿ, ಗದಗ:ಸ್ವಚ್ಚತೆ, ದೇಹದಾನ, ರಕ್ತದಾನ, ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಆಧುನಿಕ ಗಾಂಧೀಜಿಯಾದ ಮುತ್ತಣ್ಣ ತಿರ್ಲಾಪೂರ ಅವರ ಹೋರಾಟದ ಆಂದೋಲನಕ್ಕೆ ನಾವೆಲ್ಲರೂ ಸಹಕಾರ ನೀಡಬೇಕು ಎಂದು ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ ಹೇಳಿದರು.
ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಗುರುವಾರ ಮಕ್ಕಳ ದಿನಾಚರಣೆಯ ಅಂಗವಾಗಿ ಜನಜಾಗೃತಿಗಾಗಿ ಜಿಮ್ಸ್ನಿಂದ ಕಿಮ್ ವರೆಗೆ ಪಾದಯಾತ್ರೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಈ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ಅಧುನಿಕ ಗಾಂಧೀಜಿಯವರಾದ ಮುತ್ತಣ್ಣ ತಿರ್ಲಾಪೂರ ಅವರು ಒಂದು ವಾರ ಇದ್ದು ರೋಗಿಗಳಿಗೆ ಹಾಗೂ ಪಾಲಕರಿಗೆ ಸ್ವಚ್ಛತೆ, ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸಿದ್ದಾರೆ. ಇಷ್ಟೊಂದು ವಯಸ್ಸಾದರೂ ಅವರಲ್ಲಿರುವ ಸಾಮಾಜಿಕ ಕಳಕಳಿ ಹಾಗೂ ಉತ್ಸಾಹ ನೋಡಿದರೆ ನಮಗೆಲ್ಲರಿಗೂ ಹೆಮ್ಮೆ ಎನಿಸುತ್ತದೆ. ಅವರು ನಮ್ಮ ರಾಜ್ಯದ ಮತ್ತು ದೇಶದ ಆಸ್ತಿ ಎಂದು ಹೇಳಿದ ಅವರು, ನಮ್ಮ ಆಸ್ಪತ್ರೆಯಲ್ಲಿ ಪ್ರತಿ ಗುರುವಾರ ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವುದರೊಂದಿಗೆ ಶ್ರಮದಾನದ ಮೂಲಕ ಆವರಣದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಆಧುನಿಕ ಗಾಂಧೀಜಿ ಮುತ್ತಣ್ಣ ತಿರ್ಲಾಪೂರ ಮಾತನಾಡಿ, ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ನಾಡಿನ ಜನರಿಗೆ ದೇಹದಾನ, ಅಂಗಾAಗದಾನ, ರಕ್ತದಾನ, ನೇತ್ರದಾನ, ಭ್ರೂಣ ಹತ್ಯೆಯ ಬಗ್ಗೆ ಅರಿವು ಮೂಡಿಸಲು ಗದುಗಿನ ಜಿಮ್ಸ್ನಿಂದ ಹುಬ್ಬಳ್ಳಿ–ಧಾರವಾಡದ ಕಿಮ್ಸ್ವರೆಗೆ ಮೂರು ದಿನಗಳ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇನೆ. ದೇಹವು ನಮ್ಮ ಆಸ್ತಿ. ಅದನ್ನು ಇನ್ನೊಬ್ಬರಿಗೆ ದಾನ ಮಾಡಿದರೆ ಹಲವಾರ ಜನರ ಪ್ರಾಣ ಉಳಿಸಬಹುದು. ದೇಹವು ಇಟ್ಟರೆ ಕೊಳೆಯುತ್ತದೆ. ಸುಟ್ಟರೆ ಬೂದಿಯಾಗುತ್ತದೆ. ದೇಹ ಮಣ್ಣಾಗುವ ಮೊದಲು ಇನ್ನೊಬ್ಬರಿಗೆ ದಾನ ಮಾಡುವ ಮೂಲಕ ನಮ್ಮ ಜೀವನವನ್ನು ಪಾವನಗೊಳಿಸಬೇಕು. ಅಂಗಾAಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇನೆ ಎಂದು ಮುತ್ತಣ್ಣ ತಿರ್ಲಾಪೂರ ತಿಳಿಸಿದರು.
ಜಿಮ್ಸ್ನ ಹಿರಿ-ಕಿರಿಯ ವೈದ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾದಯಾತ್ರೆಗೆ ಬೆಂಬಲ ಸೂಚಿಸಿ ಆಧುನಿಕ ಗಾಂಧೀಜಿಯವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು. ಇದಕ್ಕೂ ಮುನ್ನು ಜಿಮ್ಸ್ ಆವರಣದಲ್ಲಿ ಕಸದ ವಾಹನ ಹಾಗೂ ಕಂಟೇನರ್ಗಳನ್ನು ಅವರು ಉದ್ಘಾಟಿಸಿದರು.