ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರತಿ ವಿದ್ಯಾರ್ಥಿಗೆ ಗುಣಮಟ್ಟದ ಕಲಿಕೆಯಲ್ಲಿ ತೊಡಗಿಸುವುದರ ಜೊತೆಗೆ ಗುಣಮಟ್ಟದ ಸೌಲಭ್ಯ ಕೊಡುವುದರ ಮೂಲಕ ಉತ್ತಮ ಶಿಕ್ಷಣವನ್ನು ಹೊಂದುವಂತೆ ಮಾಡಲು ಶಿಕ್ಷಕರು ಮತ್ತು ಪಾಲಕರ ಸಹಕಾರ ಅಗತ್ಯವಾಗಿದೆ. ಸರಕಾರದ ಯೋಜನೆಗಳನ್ನು ಸರಿಯಾಗಿ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಶಿಕ್ಷಣ ಇಲಾಖೆಯ ಗದಗ ಜಿಲ್ಲಾ ಉಪನಿದೇರ್ಶಕ ಆರ್.ಎಸ್. ಬುರಡಿ ಹೇಳಿದರು.
ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಬಸಪ್ಪ ಮಲ್ಲಪ್ಪ ಹೊಸೂರ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ `ಮಕ್ಕಳ ಕನ್ನಡ ಕಲರವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯ ಶಿಕ್ಷಕವೃಂದ ವಿದ್ಯಾರ್ಥಿಗಳ ಕಲಿಕಾ ವೃದ್ಧಿಗೆ ಶ್ರಮಿಸುತ್ತಿರುವುದು ಪ್ರಶಂಸನೀಯ. ಆ ಹಿನ್ನೆಲೆಯಲ್ಲಿ ಮುಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿಯೇ ಮಾದರಿ ಶಾಲೆ ಎಂದು ಗುರುತಿಸುವಂತಾಗಲಿ ಎಂದು ಆಶಿಸಿದರು.
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ವ್ಹಿ. ನಡುವಿನಮನಿ ಮಾತನಾಡಿ, ಮಕ್ಕಳ ಕನ್ನಡ ಕಲರವ ವ್ಯಕ್ತಪಡಿಸುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕು. ಮಕ್ಕಳ ಪ್ರತಿಭೆಗೆ ನೀರೆರೆದು ಬೆಳೆಸುವ ಹೊಣೆ ನಮ್ಮ ಶಿಕ್ಷಣ ಇಲಾಖೆ ಹಾಗೂ ಪಾಲಕರ ಮೇಲಿದೆ. ಯಾವ ಮಗು ಯಾವ ವಿಷಯದಲ್ಲಿ ಆಸಕ್ತಿ ಹೊಂದಿರುತ್ತದೆಯೋ ಆ ವಿಷಯದ ಕುರಿತು ಆ ಮಗುವಿಗೆ ಅಗತ್ಯವಿರುವ ತರಬೇತಿ, ಕಲಿಕೆ ನೀಡಬೇಕು ಎಂದರು.
ಅಕ್ಷರ ದಾಸೋಹ ಅಧಿಕಾರಿ ಶಂಕರ ಹಡಗಲಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಪಡೆಯುವುದರೊಂದಿಗೆ ಜೀವನದಲ್ಲಿ ಯಶಸ್ಸು ಪಡೆಯಲು ಬೇಕಾದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಿ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಎ.ಎಲ್. ಬಿಜಾಪುರ ಮಾತನಾಡಿ, ಶಾಲಾ ಪ್ರಾರಂಭದಿಂದ 20 ಅಂಶಗಳ ಶೈಕ್ಷಣಿಕ ಪರಿಣಾಮಕಾರಿ ಚಟುವಟಿಕೆಯನ್ನು ಮಾಡಲಾಗಿದ್ದು, ಮತ್ತೆ ಈ ಬಾರಿ ಉತ್ತಮ ಫಲಿತಾಂಶವನ್ನು ಪಡೆಯುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಹುಲಿಗೆಮ್ಮ ಪಾಟೀಲ್, ಗ್ರಾ.ಪಂ ಮಾಜಿ ಅಧ್ಯಕ್ಷೆ ಶಕುಂತಲಾ ಸಂಕಣ್ಣವರ, ದ್ಯಾಮಣ್ಣ ಹುಲ್ಲಣ್ಣವರ, ಪ್ರಕಾಶ ಸಂಕಣ್ಣವರ, ಮುತ್ತಣ್ಣ ಹೊಸೂರ, ಆನಂದ ಪಾಟೀಲ, ಶಂಕರ ಬಡ್ನಿ, ಪ್ರಭು ಕಾರಪುಡಿ, ಸುವರ್ಣ ಹೊಸೂರ, ಬಸವರಾಜ ನರೆಗಲ್ಲ, ಮುತ್ತು ಹಿರೇಮಠ, ಮಲ್ಲನಗೌಡ ಪಾಟೀಲ್, ಉಡಚಣಗೌಡ ಪಾಟೀಲ, ಸಂಗೀತ ಪಾಟೀಲ, ಜಿ.ಡಿ. ಗದಗಿನ, ಬಿ.ಎನ್. ಉಕ್ಕುಂದ, ಬಿ.ಡಿ. ಅರ್ಜನಾಳ, ಎಸ್.ಸಿ. ಕಂಪನಾಯಕ, ವಿಜಯ ಕಿರೇಸೂರ, ಶಂಕರಗೌಡ ಹೊಸಮನಿ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು ಇದ್ದರು.



