ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆಯೊಂದಿಗೆ ಆಚರಿಸಲಾಗುವ ಮೊಹರಂ ಹಬ್ಬದ ಅಂಗವಾಗಿ ನಡೆದ ಕಾರಣಿಕೋತ್ಸವದಲ್ಲಿ ಈ ವರ್ಷದ ಕಾರಣಿಕ ನುಡಿ ಮೊಳಗಿತು. ಗ್ರಾಮದ ಶ್ರೀ ಚೌಡದಾಪುರ ಸ್ವಾಮಿಯ ಸೇವಕ ಬಿಲ್ಲನ್ನೇರಿ, “ಮಳೆ ಬೆಳೆ ಕಷ್ಟದಿಂದ ಸಂಪಾಯಿತಲೇ ಸಂತೋಷದ ದಿನ್” ಎಂದು 2026ನೇ ಸಾಲಿನ ಕಾರಣಿಕ ನುಡಿಯನ್ನು ಘೋಷಿಸಿದರು.
ಕಾರಣಿಕೋತ್ಸವಕ್ಕೂ ಮುನ್ನ ಗಂಗೆ ಪೂಜೆ, ನೀರಿನಲ್ಲಿ ದೀಪ ಹಚ್ಚುವುದು, ಅರಿಕೆಯ ಸಕ್ಕರೆ ದಾನ, ಪಟಾಕ್ಷಿಯ ಹರಾಜು, ಸ್ವಾಮಿಯ ಕಿಚ್ಚು ಹಾಯಿಸುವುದು, ಕಾರಣಿಕ ನುಡಿಯುವುದು ಹಾಗೂ ಹುಡಿ ತುಂಬುವ ಸಂಪ್ರದಾಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಬಳಿಕ ಶ್ರೀ ಸ್ವಾಮಿಯ ಅಲಾಯಿ ಕುಣಿತವೂ ಗಮನ ಸೆಳೆಯಿತು.
ಮೊಹರಂ ಹಬ್ಬದ ಪ್ರಯುಕ್ತ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ರಿವಾಯತ್ ಜಾನಪದ ಕಲಾವಿದ ಬಡೇಸಾಬ್ ತಂಡ ತ್ಯಾಗ, ವೀರತೆ ಹಾಗೂ ಬಲಿದಾನದ ಸಂದೇಶ ಸಾರುವ ರಿವಾಯತ್ ಸವಾಲ್ ಪದಗಳನ್ನು ಹಾಡಿ ನೆರೆದಿದ್ದ ಭಕ್ತರನ್ನು ರಂಜಿಸಿತು.
ಕಾರ್ಯಕ್ರಮದಲ್ಲಿ ಹಂಪಾಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.