HomeGadag Newsಗುರುಗಳ ಋಣ, ಸ್ನೇಹದ ಬಂಧ ಜೀವನಪರ್ಯಂತ ಉಳಿಯಲಿ: ಮುಪ್ಪಿನ ಬಸವಲಿಂಗ ಸ್ವಾಮೀಜಿ

ಗುರುಗಳ ಋಣ, ಸ್ನೇಹದ ಬಂಧ ಜೀವನಪರ್ಯಂತ ಉಳಿಯಲಿ: ಮುಪ್ಪಿನ ಬಸವಲಿಂಗ ಸ್ವಾಮೀಜಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸ್ನೇಹದಲ್ಲಿ ಅಧಿಕಾರ, ಅಂತಸ್ತು, ಶ್ರೇಷ್ಠ–ಕನಿಷ್ಠ ಎಂಬ ಭಾವನೆಗಳಿಗೆ ಅವಕಾಶವಿರಬಾರದು. ಬಾಲ್ಯದಲ್ಲಿ ಬೆಳೆಸಿಕೊಂಡ ಸ್ನೇಹದ ಬಂಧ ಜೀವನದ ಕೊನೆಯ ಉಸಿರಿನವರೆಗೂ ಉಳಿಯಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ನಿಡಗುಂದಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ 2003–04ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಒಂದೇ ಶಾಲೆಯ ಮೈದಾನದಲ್ಲಿ ಆಟವಾಡಿ, ಪಾಠ ಕಲಿತು ಬಾಲ್ಯದ ದಿನಗಳನ್ನು ಕಳೆದ ವಿದ್ಯಾರ್ಥಿಗಳು ಇಂದು ರೈತರು, ಶಿಕ್ಷಕರು, ವೈದ್ಯರು, ಎಂಜಿನಿಯರ್‌ಗಳು, ಗುತ್ತಿಗೆದಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಶಾಲಾ ದಿನಗಳ ಸ್ನೇಹ ಹಾಗೂ ಆತ್ಮೀಯತೆಯನ್ನು ಮರೆಯಬಾರದು. ವೃತ್ತಿ, ಸ್ಥಾನಮಾನ ಹಾಗೂ ಆರ್ಥಿಕ ಸ್ಥಿತಿಗತಿಗಳು ಸ್ನೇಹಕ್ಕೆ ಅಳತೆಗೋಲಾಗಬಾರದು ಎಂದರು.

ಹಲವು ವರ್ಷಗಳ ಬಳಿಕ ಹಳೆಯ ಸ್ನೇಹಿತರೆಲ್ಲ ಒಂದೆಡೆ ಸೇರಿ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಿರುವುದು ಸಂತಸದ ಸಂಗತಿ. ಇಂತಹ ಸಮ್ಮಿಲನಗಳು ನಿರಂತರವಾಗಿ ನಡೆಯಬೇಕು. ಹಳೆಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ಸಂಪರ್ಕದಲ್ಲಿದ್ದು, ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಭೌತಿಕ ಅಭಿವೃದ್ಧಿಗೆ ತಮ್ಮ ಕೈಲಾದ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಅನ್ನದಾನ ಮಹಾಶಿವಯೋಗಿಗಳು ಗ್ರಾಮೀಣ ಹಾಗೂ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರ ಶಿಕ್ಷಣ ಸೇವೆ ಹಾಗೂ ದೂರದೃಷ್ಟಿ ಇಂದಿಗೂ ಮಾದರಿಯಾಗಿದೆ. ಶಿಕ್ಷಣವು ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗದೆ, ವಿಚಾರಶಕ್ತಿ, ವಿವೇಕ ಹಾಗೂ ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಬೇಕು ಎಂದರು.

ಗುರುಗಳು ವಿದ್ಯಾರ್ಥಿಗಳ ಶಿಸ್ತಿಗಾಗಿ ಕೆಲವೊಮ್ಮೆ ಶಿಕ್ಷೆ ನೀಡಿದ್ದರೂ, ಅದರ ಹಿಂದೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ಕಾಳಜಿ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಗುರುಗಳ ಸೇವೆ ಹಾಗೂ ಮಾರ್ಗದರ್ಶನವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್‌ಎವಿವಿಪಿ ಸಮಿತಿ ನರೇಗಲ್ಲ–ನಿಡಗುಂದಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ನಿಡಗುಂದಿ ಪ್ರಾಚೀನ ಕಾಲದಿಂದಲೂ ಅಗ್ರಹಾರವಾಗಿ ಗುರುತಿಸಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ಪ್ರಮುಖ ಕೇಂದ್ರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ಜಗದೀಶ ಕರಡಿ, ಶಾಲೆ ಹಾಗೂ ಶಿಕ್ಷಕರು ಸಮಾಜದಲ್ಲಿ ಪವಿತ್ರ ಸ್ಥಾನ ಹೊಂದಿದ್ದಾರೆ. ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಬೇಕು ಎಂದರು.

ಶಾಖಾ ಶಿವಯೋಗ ಮಂದಿರ ನಿಡಗುಂದಿ ಕೊಪ್ಪ ಶ್ರೀಮಠದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ ನಿರಂತರವಾಗಿ ಗುರುವಂದನಾ ಕಾರ್ಯಕ್ರಮಗಳು ನಡೆಯುತ್ತಿರುವುದು ಇಲ್ಲಿನ ಶಿಕ್ಷಣ ಪರಂಪರೆ ಹಾಗೂ ಗುರುಗಳ ಸೇವೆಗೆ ಸಾಕ್ಷಿಯಾಗಿದೆ ಎಂದರು.

ಧರ್ಮರಮಠದ ನಾಗಪ್ಪಜ್ಜನವರು ಧರ್ಮರ, ನಿವೃತ್ತ ಶಿಕ್ಷಕ ಪಿ.ಕೆ. ಕರಡಿ, ಶಿಕ್ಷಕ ಎಸ್.ವಿ. ಹಳ್ಳಿಕೇರಿ ಹಾಗೂ ಮುಖ್ಯ ಶಿಕ್ಷಕ ಎಂ.ಬಿ. ಕೊಪ್ಪದ ಮಾತನಾಡಿದರು.

ಹಳೆಯ ವಿದ್ಯಾರ್ಥಿಗಳಾದ ಅಶೋಕ ಸರ್ವಿ, ರಮೇಶ ಉಳ್ಳಾಗಡ್ಡಿ, ಮಂಜುಳಾ ಕರಡಿ, ನೀಲಮ್ಮ ಲಗುಬಗಿ ಹಾಗೂ ಶಕೀನಾ ಅಂಗಡಿ ತಮ್ಮ ಶಾಲಾ ದಿನಗಳ ಸವಿನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಎಂ.ಎಂ. ಸರ್ವಿ, ಎಂ.ಕೆ. ಸರ್ವಿ, ಕೆ.ಬಿ. ಗಡಾದ, ಬಿ.ಪಿ. ಕಾಗಿ, ಗುರುಮೂರ್ತಿ ಮಂಟಯ್ಯನವರಮಠ, ಎಸ್.ಬಿ. ಹಿರೇಮಠ, ನಂದಾ ಮೆಣಸಗಿ, ಧರ್ಮಾಯತ, ಪೂಜಾ ಅಂಗಡಿ, ಚೇತನ್ ಭೂಸನೂರಮಠ, ವೀರಪ್ಪ ಅರಮನಿ ಸೇರಿದಂತೆ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಿಕ್ಷಕ ಗೋಪಾಲ ಗೋಂದಳೆ ಸ್ವಾಗತಿಸಿದರು. ತಿಪ್ಪನಗೌಡ ಪಾಟೀಲ ವಂದಿಸಿದರು. ಎಚ್.ಬಿ. ಕಟ್ಟಿಮನಿ ನಿರೂಪಿಸಿದರು.

ಹಳೆಯ ವಿದ್ಯಾರ್ಥಿಗಳೆಲ್ಲ ಹಲವು ವರ್ಷಗಳ ಬಳಿಕ ಒಂದೆಡೆ ಸೇರಿ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಿರುವುದು ಸಂತಸದ ಸಂಗತಿ. ಇಂತಹ ಸಮ್ಮಿಲನಗಳು ನಿರಂತರವಾಗಿ ನಡೆಯಬೇಕು. ಹಳೆಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ಸಂಪರ್ಕದಲ್ಲಿದ್ದು, ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು.

– ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img