ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜನಪದ ಮತ್ತು ಶರಣ ಸಾಹಿತ್ಯ ಪರಿಷತ್ತಿಗೆ ಗೋ.ರು. ಚನಬಸಪ್ಪ ಅವರ ಸೇವೆ ಅನುಪಮ ಎಂದು ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಹೇಳಿದರು.
ಅವರು ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಗಳ ಆಶ್ರಯದಲ್ಲಿ ನಡೆದ ಗೋ.ರು. ಚನಬಸಪ್ಪ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನ ಉದ್ದಗಲಕ್ಕೂ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆ ನಡೆಯುವಂತೆ ಮಾಡಿದ ಕೀರ್ತಿ ಗೋ.ರು. ಚನಬಸಪ್ಪ ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಕಾರ್ಯಗಳು ಇಂದಿಗೂ ಜೀವಂತವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಂಡ್ಯದಲ್ಲಿ ನಡೆಯಲಿರುವ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.
ಉಪನ್ಯಾಸ ನೀಡಿದ ಶಿಕ್ಷಕ ಎಂ.ಕೆ. ಲಮಾಣಿ, ಗೋ.ರು. ಚನಬಸಪ್ಪ ಅವರು ಕ್ನನಡ ಹೆಮ್ಮೆಯಾಗಿದ್ದು, ಸಾಹಿತ್ಯ ಪರಿಷತ್ತಿಗೆ ಜೀವಕಳೆ ನೀಡುವ ಕಾರ್ಯ ಮಾಡಿದರು. ಗೋಟಗೋಡಿಯಲ್ಲಿನ ಜಾನಪದ ವಿಶ್ವವಿದ್ಯಾಲಯ ಸ್ಥಾಪನಾ ಕಾರ್ಯದಲ್ಲಿ ಗೋ.ರು.ಚನಬಸಪ್ಪ ಅವರು ಮಹತ್ತರ ಪಾತ್ರವಹಿಸಿದ್ದರು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಗೋ.ರು. ಚನಬಸಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅಮೋಘವಾದುದು ಎಂದು ಹೇಳಿದರು. ತಾಲೂಕಾ ಶಸಾಪ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಪ್ರಾಸ್ತಾವಿಕ ನುಡಿದರು.
ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಬಸಣ್ಣ ಬೆಂಡಿಗೇರಿ, ಡಾ. ಎಸ್.ಜಿ. ಹೂವಿನ, ನಿರ್ಮಲಾ ಅರಳಿ, ಕರಿಯಪ್ಪ ಶಿರಹಟ್ಟಿ, ಜಿ.ಎಸ್. ರಾಮಶೆಟ್ಟರ, ರೇಖಾ ವಡಕಣ್ಣವರ, ಎಂ.ಎನ್. ಗೊರವರ, ಪ್ರತಿಮಾ ಮಹಾಜನಶೆಟ್ಟರ, ಅನ್ನಪೂರ್ಣ ಓದುನವರ ಸೇರಿ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು ಇದ್ದರು.