ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ದೀಪವು ಜ್ಞಾನದ ಸಂಕೇತ. ದೀಪದಿಂದ ಹೊರಡುವ ಬೆಳಕು ನಮ್ಮ ಮನದಲ್ಲಿನ ಕತ್ತಲೆಯನ್ನು ಕಳೆದು ಶಾಂತಿಯನ್ನು ಕೊಡುತ್ತದೆ. ಆದ್ದರಿಂದ ದೀಪೋತ್ಸವದ ಕಲ್ಪನೆಯನ್ನು ನಮ್ಮ ಹಿರಿಯರು ನೀಡಿದ್ದಾರೆ ಎಂದು ಹೆಬ್ಬಳ್ಳಿ ಚೈತನ್ಯಾಶ್ರಮದ ಶ್ರೀ ದತ್ತಾವಧೂತ ಮಹಾರಾಜರು ಹೇಳಿದರು.
ಪಟ್ಟಣದ ಶ್ರೀ ನಾರಾಯಣ ದೇವಸ್ಥಾನದಲ್ಲಿ ಚಂಪಾಷಷ್ಠಿಯ ದಿನದಂದು ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ನಮ್ಮ ಹಿರಿಯರು ಹಬ್ಬ-ಹರಿದಿನಗಳನ್ನು ಮಾಡಿರುವುದೇ ವೈಜ್ಞಾನಿಕ ತಳಹದಿಯ ಮೇಲೆ. ಪ್ರತಿ ಹಬ್ಬಕ್ಕೂ ತನ್ನದೇ ಆದ ವಿಶಿಷ್ಠ ಅರ್ಥವಿದೆ. ಅದನ್ನು ತಿಳಿದುಕೊಂಡು ಹಬ್ಬಗಳನ್ನಾಚರಿಸಿದರೆ ನಮಗೆ ಸಿಗುವ ಆನಂದ ಅವರ್ಣನೀಯ. ರಾಷ್ಟ್ರಕೂಟರ ಕಾಲದ ಈ ದೇವಸ್ಥಾನವನ್ನು ಕಂಡು ಬಹಳಷ್ಟು ಆನಂದವಾಗಿದೆ. ಆದರೆ ಇದು ಜನರ ಮತ್ತು ಸರಕಾರದ ಅವಕೃಪೆಗೆ ಒಳಗಾಗಿರುವುದನ್ನು ಕಂಡು ಮನಸ್ಸಿಗೆ ನೋವಾಗಿದೆ. ಆದರೂ ಇಷ್ಟಾದರೂ ಉಳಿದುಕೊಂಡು ಬಂದಿರುವದು, ಅದರಲ್ಲಿ ಕಳೆದ ಇಪ್ಪತ್ತೆöÊದು ವರ್ಷಗಳಿಂದ ದೀಪೋತ್ಸವವನ್ನು ನಡೆಸಿಕೊಂಡು ಬಂದಿರುವ ಕೃಷ್ಣ ಗ್ರಾಮಪುರೋಹಿತ ಅವರ ಮನೆತನದವರನ್ನು ಅಭಿನಂದಿಸುವದಾಗಿ ಶ್ರೀಗಳು ಹೇಳಿದರು.
ಸರಕಾರ ಈ ದೇವಸ್ಥಾನದ ಕಡೆಗೆ ಗಮನ ನೀಡಬೇಕು. ರಾಷ್ಟ್ರಕೂಟ ಶೈಲಿಯ ಇಷ್ಟು ದೊಡ್ಡ ದೇವಸ್ಥಾನ ಬಹುಶಃ ಎಲ್ಲಿಯೂ ಇಲ್ಲ. ಇದನ್ನು ಸಂರಕ್ಷಣೆ ಮಾಡುವದರ ಜೊತೆಗೆ ಇಲ್ಲಿ ಅನೇಕ ಉತ್ಸವಗಳು, ಹಬ್ಬದ ಆಚರಣೆಗಳು ನಡೆಯುವಂತೆ ನೋಡಿಕೊಳ್ಳಬೇಕು. ಇಲ್ಲಿ ನಡೆಯುತ್ತಿರುವ ಬೆಳ್ಳಿ ಹಬ್ಬದ ದೀಪೋತ್ಸವದಲ್ಲಿ ನಾವು ಪಾಲ್ಗೊಳ್ಳುವ ಅವಕಾಶ ನೀಡಿದ ಶ್ರೀಮನ್ನಾರಾಯಣನಿಗೆ ನಮ್ಮ ಭಕ್ತಿಪೂರ್ವಕ ನಮನಗಳು ಎಂದರು.
ಅರ್ಚಕ ಕೃಷ್ಣಾ ಗ್ರಾಮಪುರೋಹಿತ ಪರಿವಾರದವರು, ಹೆಬ್ಬಳ್ಳಿ ಚೈತನ್ಯಾಶ್ರಮದವರು, ಅನಸೂಯಾ ಮಹಿಳಾ ಮಂಡಳದ ಸದಸ್ಯರು ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ಎಸ್.ಎಚ್. ಕುಲಕರ್ಣಿ ಸ್ವಾಗತಿಸಿದರು. ಮಂಜುನಾಥ ಗ್ರಾಮಪುರೋಹಿತ ನಿರೂಪಿಸಿದರು. ಆದರ್ಶ ಕುಲಕರ್ಣಿ ವಂದಿಸಿದರು.