ಬೆಂಗಳೂರು:- ಐಟಿ ಬೆಳವಣಿಗೆಯಲ್ಲಿ SM ಕೃಷ್ಣ ಅವರ ಕೊಡುಗೆ ಅಪಾರ ಎಂದು CM ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣಾ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಎಸ್ಎಂಕೆ ಅವರು ಕರ್ನಾಟಕ ಹಾಗೂ ದೇಶದ ರಾಜಕಾರಣದಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರು. ಆರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದರು. ವಿಧಾನಸಭೆ, ಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದರು.
ಐದು ವರ್ಷಗಳ ಕಾಲ ರಾಜ್ಯದ ಸಿಎಂ ಆಗಿದ್ದರು. ಬೆಂಗಳೂರನ್ನು ಸಿಂಗಾಪುರ ಮಾಡಬೇಕೆನ್ನುವ ಕನಸನ್ನು ಕಂಡಿದ್ದರು. ಐಟಿ ಬೆಳವಣಿಗೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದುಕೊಂಡಿರುವುದರಲ್ಲಿ ಎಸ್ಎಂಕೆ ಪಾತ್ರ ದೊಡ್ಡದಿದೆ ಎಂದು ಸ್ಮರಿಸಿದರು.
ಸಿಎಂ ಆಗಿದ್ದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಬರಗಾಲ, ಡಾ.ರಾಜ್ ಕುಮಾರ್ ಕಿಡ್ನಾಪ್, ಕಾವೇರಿ ವಿವಾದ ಹೀಗೆ ಹಲವು ಸಮಸ್ಯೆಗಳನ್ನು ಜಾಣ್ಮೆಯಿಂದ ನಿರ್ವಹಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ನಾನು ಕಾಂಗ್ರೆಸ್ ಸೇರುವ ಮೊದಲು ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ವಿಚಾರ ತಿಳಿಸಿದ್ದೆನು. ನೀವು ಕಾಂಗ್ರೆಸ್ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದರು. ಸಜ್ಜನ ರಾಜಕಾರಣ, ಎಸ್ಎಂಕೆಯಂತಹ ಒಳ್ಳೆಯ ವಾಗ್ಮಿಯನ್ನು ಕಳೆದುಕೊಂಡಿದ್ದು ರಾಜಕೀಯ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.