ಬೆಂಗಳೂರು:-ಭಾರತದಲ್ಲಿ ನರಮೇಧ ನಡೆಯುತ್ತಿದೆ ಎಂದು ಸುಮಾರು 24 ಪುಟಗಳ ಡೆತ್ ನೋಟ್ ಬರೆದಿಟ್ಟು ಟೆಕ್ಕಿ ಸೂಸೈಡ್ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಪತ್ನಿಯ ಕಿರುಕುಳದಿಂದ ಬೇಸತ್ತು ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದು, ಹಲವು ವಿಚಾರಗಳನ್ನು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.
ತನ್ನ ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬದವರು ಚಿತ್ರಹಿಂಸೆ ನೀಡುತ್ತಿದ್ದರು, ನನ್ನದೇನೂ ತಪ್ಪಿಲ್ಲದಿದ್ದರೂ ತನ್ನ ಮೇಲೆ 9 ಪ್ರಕರಣಗಳನ್ನು ದಾಖಲಿಸಿದ್ದರು. ಆರು ಪ್ರಕರಣಗಳು ಕೆಳ ನ್ಯಾಯಾಲಯದಲ್ಲಿದ್ದರೆ ಮೂರು ಪ್ರಕರಣಗಳು ಹೈಕೋರ್ಟ್ನಲ್ಲಿವೆ. ಒಂದು ಬಾರಿ ಒಂದು ಪ್ರಕರಣವನ್ನು ವಾಪಸ್ ಪಡೆದಿದ್ದಳು ಆದರೆ ಕೊನೆಗೆ ಅದರ ಬದಲು ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಳು ಎನ್ನುವ ವಿಚಾರವನ್ನು ಅವರು ಬರೆದಿದ್ದಾರೆ.
ಇರುವುದು ಬೆಂಗಳೂರಿನಲ್ಲಿ ಆದರೆ 9 ಪ್ರಕರಣಗಳ ವಿಚಾರಣೆಗಾಗಿ ಪದೇ ಪದೇ ಉತ್ತರ ಪ್ರದೇಶಕ್ಕೆ ಹೋಗಬೇಕಿತ್ತು, ಜತೆಗೆ ಹಣದ ಬೇಡಿಕೆಯನ್ನು ಪೂರೈಸಿ ನನಗೆ ಸಾಕಾಗಿದೆ. ನಾನು ದುಡಿದಿರುವುದೆಲ್ಲಾ ಹಣವನ್ನು ಶತ್ರುಗಳನ್ನು ಸಾಕಲು ಕೊಡಬೇಕಾಗುತ್ತಿತ್ತು, ಅದರಿಂದ ಶತ್ರುಗಳು ಬಲವಾಗುತ್ತಾ ಹೋಗುತ್ತಿದ್ದಾರೆ ಎಂದು ಬರೆದಿದ್ದಾರೆ.
ಭಾರತದಲ್ಲಿ ನರಮೇಧ ನಡೆಯುತ್ತಿದೆ, ಕೋಟಿಗಟ್ಟಲೆ ಜನರನ್ನು ರಕ್ಷಿಸಿ ವಾಕ್ ಸ್ವಾತಂತ್ರ್ಯವನ್ನು ಮರುಸ್ಥಾಪಿಸಿ ಎಂದು ಟ್ರಂಪ್ ಹಾಗೂ ಎಲಾನ್ ಮಸ್ಕ್ಗೆ ಮನವಿ ಮಾಡಿದ್ದಾರೆ.