ವಿಜಯಸಾಕ್ಷಿ ಸುದ್ದಿ, ಗದಗರಾಜ್ಯದ ಜನರ ಆಶೀರ್ವಾದದಿಂದ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ದೊರಕಿದೆ. ಜನರಿಗೆ ನೀಡಿದ ಐದು ಗ್ಯಾರಂಟಿ ಭರವಸೆಗಳನ್ನು ಕೊಟ್ಟ ಮಾತಂತೆ ನೆರವೇರಿಸಿ, ಅರ್ಹ ಫಲಾನುಭವಿಗಳಿಗೆ ದೊರಕಿಸುವದರ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ನುಡಿದರು.
ಗದಗ ತಾಲೂಕಿನ ಸುಕ್ಷೇತ್ರ ಹರ್ಲಾಪುರ ಗ್ರಾಮದಲ್ಲಿ ಡಿ.15ರಂದು ಶ್ರೀ ಬೀರಲಿಂಗೇಶ್ವರ, ಶ್ರೀ ಮಾಳಿಂಗರಾಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರು ಯಾರೂ ಕೂಡ ಇನ್ನೊಬ್ಬರಲ್ಲಿ ಕೈ ಒಡ್ಡದಂತೆ, ಯಾರೂ ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಒಂದು ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷಿö್ಮÃ ಯೋಜನೆಯಲ್ಲಿ ಪ್ರತಿ ಮಾಹೆ ಎರಡು ಸಾವಿರ ರೂಗಳನ್ನು ಪಡೆಯುತ್ತಿದ್ದಾರೆ. ಬಹು ದಿನಗಳ ನಂತರ ನಿಮ್ಮ ಗ್ರಾಮಕ್ಕೆ ಆಗಮಿಸಿದ್ದೇನೆ. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ ಸಮಯದಲ್ಲಿ ಹರ್ಲಾಪುರ ಹಾಗೂ ಮುಂಡರಗಿ ಜನ ಆಶೀರ್ವಾದ ಮಾಡಿದ್ದರು. ಇದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಅನಾದಿ ಕಾಲದಿಂದಲೂ ಜನ ದೇವಸ್ಥಾನ ನಿರ್ಮಿಸಿ, ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುವ ಸಂಸ್ಕೃತಿ ರೂಡಿಯಲ್ಲಿದೆ. ದೇವರನ್ನು ಭಕ್ತಿಯಿಂದ ಪೂಜೆ ಮಾಡಿದರೆ ದೇವರು ನಮಗೆ ವರ ನೀಡುವದರ ಮೂಲಕ ನಮ್ಮ ಕಷ್ಟ-ಕಾರ್ಪಣ್ಯಗಳು ದೂರಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ ಎಂದ ಅವರು, ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಿ ನಾನು ಬಡವನಯ್ಯ, ಕಾಲೇ ಕಂಬಗಳು, ಶಿರವೇ ಹೊನ್ನ ಕಳಶವಯ್ಯ ಎಂಬ ಬಸವಣ್ಣನವರ ವಚನವನ್ನು ಸ್ಮರಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಭಕ್ತನಿಗೂ-ದೇವರಿಗೂ ವ್ಯವಹಾರ ಮಾಡುವಂತಹ ಸ್ಥಳ ದೇವಸ್ಥಾನವಾಗಿದೆ. ನಮ್ಮೆಲ್ಲರ ಜೀವನ ಸುಖಕರವಾಗಿರಲು ಭೀರಲಿಂಗೇಶ್ವರನ ಕೃಪೆ ಎಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸಿದರು.
ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ್ ಪ್ರಾಸ್ತಾವಿಕವಾಗಿ ಮಾತಾನಾಡಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಲ್ಲಾಭಕ್ಷ ಬಬರ್ಚಿ, ಪ್ರಮುಖರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಕೃಷ್ಣಗೌಡ ಪಾಟೀಲ, ಫಕಿರಪ್ಫ ಹೆಬಸೂರ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಮುಂತಾದವರಿದ್ದರು.
ದೇವರು ಸರ್ವವ್ಯಾಪಿಯಾಗಿದ್ದು, ನಮ್ಮ ಬದುಕು, ನಡುವಳಿಕೆಯಲ್ಲಿ ಇನ್ನೊಬ್ಬರಿಗೆ ಅನ್ಯಾಯ, ಕೆಟ್ಟದನ್ನು ಮಾಡಬಾರದು. ಈ ಗ್ರಾಮ ಭಾವಕೈತ್ಯೆಯಿಂದ, ಸೌಹಾರ್ದತೆಯಿಂದ ಬದುಕುತ್ತಿರುವದು ಶ್ಲಾಘನೀಯ. ಇದೇ ರೀತಿ ಇಡೀ ದೇಶದಲ್ಲಿ ಪ್ರತಿಯೊಬ್ಬರೂ ಬದುಕಬೇಕು. ಯಾವುದೇ ಧರ್ಮವು ಪರಸ್ಪರ ದ್ವೇಷ ಮಾಡುವಂತೆ ಹೇಳುವುದಿಲ್ಲ. ಧರ್ಮದ ಪ್ರಕಾರ ಪ್ರತಿಯೊಬ್ಬರೂ ಮನುಷ್ಯರಂತೆ ಬದುಕಬೇಕೇ ಹೊರತು ಮೃಗಗಳಂತೆ ಜೀವಿಸಬಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಿಳಿಸಿದರು.
ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಜನರ ಬಡತನವನ್ನು ಬೇರು ಸಹಿತ ಕಿತ್ತೊಗೆದ ಮಹಾನ್ ವ್ಯಕ್ತಿ ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ಈ ಭಾಗದಲ್ಲಿ ಶಾಸಕರಾದ ಜಿ.ಎಸ್. ಪಾಟೀಲರಿಂದ ಅನೇಕ ರಚನಾತ್ಮಕ ಕಾರ್ಯಗಳು ಆಗುತ್ತಿವೆ. ಸಿಂಗಟಾಲೂರ ಏತನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮಾನ್ಯ ಉಪ ಮುಖ್ಯಂಮತ್ರಿಗಳಲ್ಲಿ ಸಚಿವ ಎಚ್.ಕೆ. ಪಾಟೀಲ ಮನವಿ ಮಾಡಿದರು.



