ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಸೋಮವಾರ ಸಂಜೆ 4 ಗಂಟೆಗೆ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್ ಹೈಕಮಾಂಡ್ ಅಂತಿಮ ಹಂತದ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ನೂತನ ಸಚಿವರ ಪ್ರಮಾಣವಚನಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಆಗಸ್ಟ್ 2ರಂದು ನೂತನ ಸಚಿವರ ಪಟ್ಟಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈ ಸೇರಲಿದ್ದು, ಭಾನುವಾರ ಸಂಜೆ ವೇಳೆಗೆ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಖಾಲಿ ಇರುವ 20 ಸಚಿವ ಸ್ಥಾನಗಳ ಪೈಕಿ ಸುಮಾರು 18 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪ್ರತ್ಯೇಕ ಪಟ್ಟಿಗಳನ್ನು ಹೈಕಮಾಂಡ್ಗೆ ಸಲ್ಲಿಸಿದ್ದು, ಜಾತಿ ಹಾಗೂ ಪ್ರಾದೇಶಿಕ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ.
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಹೆಸರುಗಳು:
- ಎಸ್.ಎಸ್. ಮಲ್ಲಿಕಾರ್ಜುನ – ಲಿಂಗಾಯತ, ದಾವಣಗೆರೆ ಶಾಸಕ
- ಎನ್. ಚಲುವರಾಯಸ್ವಾಮಿ – ಒಕ್ಕಲಿಗ, ನಾಗಮಂಗಲ ಶಾಸಕ
- ಜಮೀರ್ ಅಹ್ಮದ್ – ಮುಸ್ಲಿಂ, ಚಾಮರಾಜಪೇಟೆ ಶಾಸಕ
- ಶರತ್ ಬಚ್ಚೇಗೌಡ – ಒಕ್ಕಲಿಗ, ಹೊಸಕೋಟೆ ಶಾಸಕ
- ಆನೇಕಲ್ ಶಿವಣ್ಣ – ದಲಿತ, ಆನೇಕಲ್ ಶಾಸಕ
- ಕೆ.ಎಸ್. ಬಸವಂತಪ್ಪ – ದಲಿತ ಎಡಗೈ, ಮಾಯಕೊಂಡ ಶಾಸಕ
- ಜೆ.ಎನ್. ಗಣೇಶ – ಪರಿಶಿಷ್ಟ ಪಂಗಡ, ಕಂಪ್ಲಿ ಶಾಸಕ
- ರುದ್ರಪ್ಪ ಲಮಾಣಿ – ಪರಿಶಿಷ್ಟ ಜಾತಿ, ಹಾವೇರಿ ಶಾಸಕ
- ಎ.ಎಸ್. ಪೊನ್ನಣ್ಣ – ಕೊಡವ ಸಮುದಾಯ, ವಿರಾಜಪೇಟೆ ಶಾಸಕ
- ಬೇಳೂರು ಗೋಪಾಲಕೃಷ್ಣ – ಈಡಿಗ ಸಮುದಾಯ, ಸಾಗರ ಶಾಸಕ
- ಶಿವಣ್ಣನವರ್ – ಕುರುಬ ಸಮುದಾಯ, ಬ್ಯಾಡಗಿ ಶಾಸಕ
- ಶ್ರೀನಿವಾಸ್ ಮಾನೆ – ಮರಾಠ ಸಮುದಾಯ, ಹಾನಗಲ್ ಶಾಸಕ
- ಮಂಕಾಳು ವೈದ್ಯ – ಮೊಗವೀರ ಸಮುದಾಯ, ಭಟ್ಕಳ ಶಾಸಕ
ಈ ನಡುವೆ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಸಚಿವ ಸಂಪುಟ ಸೇರ್ಪಡೆ ಕುರಿತು ಕುತೂಹಲ ಹೆಚ್ಚಾಗಿದೆ. ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ನಲ್ಲಿ ಚರ್ಚೆ ನಡೆದಿತ್ತು. ಈ ವಿಚಾರವಾಗಿ ಜಮೀರ್ ಅವರು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಬಳಿ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದರು ಎನ್ನಲಾಗಿದೆ.
ಜಮೀರ್ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗುತ್ತದೆಯೇ ಎಂಬುದು ಹೈಕಮಾಂಡ್ ಮಟ್ಟದ ಅಂತಿಮ ಚರ್ಚೆಯಲ್ಲಿ ನಿರ್ಧಾರವಾಗಲಿದೆ.
ಇದೇ ವೇಳೆ, ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ಪ್ರಯತ್ನ ಮುಂದುವರಿಸಿದ್ದಾರೆ. ಶಾಸಕ ಅಪ್ಪಾಜಿಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. “ನನಗೆ ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ ನಡೆದಿದೆ, ಆದರೆ ಈ ಬಾರಿ ಅವಕಾಶ ಸಿಗುವ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ.
ಅಂತಿಮ ಪಟ್ಟಿಗೆ ಹೈಕಮಾಂಡ್ ಅನುಮೋದನೆ ದೊರೆತ ಬಳಿಕ ರಾಜ್ಯಪಾಲರ ಕಚೇರಿಗೆ ಮಾಹಿತಿ ರವಾನಿಸಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.



