ಬೆಂಗಳೂರು:- ಹಣದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿ ಓರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ರಾಜಧಾನಿ ಬೆಂಗಳೂರಿನ ಬೇಗೂರಿನಲ್ಲಿ 45 ವರ್ಷದ ಅಫ್ಸರ್ ಕೊಲೆಯಾದ ವ್ಯಕ್ತಿ. ಅಫ್ಸರ್ ಬೆಂಗಳೂರಿನ ಶಿವಾಜಿನಗರ ನಿವಾಸಿಯಾಗಿದ್ದ. ಕಳೆದ 8 ತಿಂಗಳ ಹಿಂದೆ ಅಕ್ಬರ್ ಹಾಗೂ ಅಫ್ಸರ್ ಅಂಗಡಿ ಶುರು ಮಾಡಿದ್ದರು. ಆದರೆ ಅಂಗಡಿಯಲ್ಲಿ ವ್ಯಾಪಾರ ಸರಿಯಾಗಿ ಆಗುತ್ತಿರಲಿಲ್ಲ. ಇದರಿಂದ ಪ್ರತ್ಯೇಕ ಅಂಗಡಿ ತೆರೆಯಲು ಅಕ್ಬರ್ ನಿರ್ಧರಿಸಿದ್ದ. ಬಂಡವಾಳದ ಹಣ ವಾಪಸ್ ನೀಡುವಂತೆ ಅಫ್ಸರ್ನನ್ನು ಕೇಳಿದ್ದ. ಅಫ್ಸರ್ ಸುಮಾರು 3 ಲಕ್ಷ ಹಣ ವಾಪಸ್ ನೀಡಿದ್ದ. ಆದರೆ ಬಾಕಿ 20,000 ಹಣ ಕೊಡುವಂತೆ ಅಕ್ಬರ್ ಒತ್ತಾಯಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ.
ಗಲಾಟೆ ವೇಳೆ ಇಬ್ಬರ ನಡುವೆ ತಳ್ಳಾಟ, ನೂಕಾಟ ನಡೆದಿದೆ. ಈ ವೇಳೆ ಅಕ್ಬರ್ ಅಂಗಡಿಯಲ್ಲಿದ್ದ ಮಚ್ಚಿನಿಂದಲೇ ಅಫ್ಸರ್ ತಲೆಗೆ ಹೊಡೆದಿದ್ದ. ಇದರಿಂದ ತೀವ್ರ ರಕ್ತಸ್ರಾವವಾಗಿ ಅಫ್ಸರ್ ಅಂಗಡಿಯಲ್ಲೇ ಪ್ರಾಣಬಿಟ್ಟಿದ್ದಾನೆ.
ಸ್ಥಳಕ್ಕೆ ಬೇಗೂರು ಪೊಲೀಸರು, ಸೋಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.