ಮನೆಯ ಹಿತ್ತಲಿನಲ್ಲಿರುವ ಅದೆಷ್ಟೋ ಸಸ್ಯಗಳು ಸಾಮಾನ್ಯ ಕಾಯಿಲೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ಹೂವಿನ ಗಿಡಗಳ ನಡುವೆಯೇ ಬೆಳೆದು ಆರೋಗ್ಯ ವೃದ್ಧಿಸುವ ಕೆಲಸ ಮಾಡುವ ಪುಟ್ಟ ಪುಟ್ಟ ಗಿಡಗಳ ಆರೋಗ್ಯ ಗುಣ ಮಾತ್ರ ಬಹು ದೊಡ್ಡದು. ಅದರಲ್ಲಿ ದೊಡ್ಡ ಪತ್ರೆ ಗಿಡ ಕೂಡ ಒಂದು. ಸಾಮಾನ್ಯವಾಗಿ ಎಲ್ಲರ ಮನೆಯ ಹಿತ್ತಲಿನಲ್ಲಿ ಈ ದೊಡ್ಡ ಪತ್ರೆ ಗಿಡ ಕಂಡು ಬರುತ್ತದೆ.
ಇದು ಸಾಮಾನ್ಯ ಶೀತ, ಜ್ವರಕ್ಕೆ ಉತ್ತಮ ಮನೆಮದ್ದಾಗಿದೆ. ಆರೋಗ್ಯ ಹದಗೆಟ್ಟ ತಕ್ಷಣ ಆಸ್ಪತ್ರೆಗೆ ಓಡುವ ಬದಲು ಒಮ್ಮೆ ಮನೆಯ ಹಿತ್ತಲಿನಲ್ಲಿ ಕಣ್ಣಾಡಿಸಿ, ಅಥವಾ ಆಯುರ್ವೇದ ವೈದ್ಯರನ್ನು ಒಮ್ಮೆ ಸಂಪರ್ಕಿಸಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಹೇಗೆ ಅನಾರೋಗ್ಯವನ್ನು ಸರಿಪಡಿಸಿಕೊಳ್ಳುವುದು ಎಂದು ಹೇಳುತ್ತಾರೆ.
ಮಕ್ಕಳ ಜ್ವರ: ಮಕ್ಕಳಿಗೆ ಜ್ವರ ಬಂದಿದ್ದರೆ ಕೂಡಲೇ ಆಸ್ಪತ್ರೆಗೆ ಹೋಗಲು ಅವಕಾಶ ಇಲ್ಲದಿದ್ದಲ್ಲಿ ದೊಡ್ಡ ಪತ್ರೆ ಎಲೆಯನ್ನು ಸ್ವಲ್ಪ ಬೆಳಕಿಯ ಝಳದಲ್ಲಿ ಬಾಡಿಸಿ ಜ್ವರ ಇರುವ ಮಕ್ಕಳ ತಲೆ ಮೇಲೆ ಇಟ್ಟರೆ ತಾತ್ಕಾಲಿಕ ಮಟ್ಟಕ್ಕೆ ಜ್ವರ ಕಡಿಮೆ ಆಗುತ್ತದೆ.
ಕಣ್ಣಿನ ಉರಿಗೆ ದಿವ್ಯೌಷಧ: ಇನ್ನು ದೊಡ್ಡಪತ್ರೆ ಎಲೆಯನ್ನು ತಂದು ಅವುಗಳನ್ನು ಹಿಂಡಿ (ಎರಡೂ ಅಂಗೈಗಳಿಂದ ತಿಕ್ಕಿ ಹಿಂಡುವುದು ಅಥವಾ ಸಣ್ಣ ಒಳಕಲ್ಲಿನಲ್ಲಿ ಜಜ್ಜಿ ರಸ ತೆಗೆಯುವುದು) ರಸ ತೆಗೆಯಬೇಕು. ನಂತರ ಆ ದೊಡ್ಡಪತ್ರೆ ಎಲೆಯ ರಸದಷ್ಟೇ ಪ್ರಮಾಣದ ಎಳ್ಳೆಣ್ಣೆಯನ್ನು ನಿತ್ಯ ತಲೆಗೆ ಹಚ್ಚುವುದರಿಂದ ಕಣ್ಣಿನ ಉರಿ ಕಡಿಮೆ ಆಗುತ್ತದೆ.
ಬೇಧಿಗೂ ಒಳಿತು : ಮಕ್ಕಳಿಗೆ ಬೇಧಿ ಆಗುತ್ತಿದ್ದರೆ ಮಕ್ಕಳಿಗೆ ದೊಡ್ಡಪತ್ರೆ ಎಲೆಗಳನ್ನು ಜಜ್ಜಿ ರಸವನ್ನು ತೆಗೆದು ಜೇನಿನನ್ನು ಮಿಶ್ರಣ ಮಾಡಿ ಕುಡಿಸಿದರೆ ಬೇಧಿ ಹಾಗೂ ಕಫ ಕಡಿಮೆ ಆಗುತ್ತದೆ. ಜೊತೆಗೆ, ಶೀತದಿಂದ ಉಂಟಾದ ಮಲಬದ್ಧತೆಯೂ ಕಡಿಮೆಯಾಗುತ್ತದೆ.
ಕೆಮ್ಮು, ಕಫ, ಶೀತ ಓಡಿಸುವಲ್ಲಿ ದೊಡ್ಡ ಪಾತ್ರ: ಇನ್ನು ಮಕ್ಕಳಿಗೆ ಆಗಿಂದಾಗ್ಗೆ ಕಾಣಿಸಿಕೊಳ್ಳುವ ಶೀತ, ಕೆಮ್ಮು ಹಾಗೂ ಕಫ ಗುಣಪಡಿಸಲು ದೊಡ್ಡಪತ್ರೆ ಎಲೆಗಳನ್ನು ಹೀಗೆ ಬಳಸಬೇಕು. ನಾಲ್ಕೈದು ದೊಡ್ಡಪತ್ರೆ ಎಲೆಗಳನ್ನು ಕೆಂಡದಲ್ಲಿ ಬಾಡಿಸಿ, ಅದರ ರಸವನ್ನು ಹಿಂಡಿ ಕಹಿ ಅಂಶ ತಗ್ಗುವಂತೆ ಜೇನು ಮಿಶ್ರಣ ಮಾಡಿ ಮಕ್ಕಳಿಗೆ ಕುಡಿಸಿದರೆ ಶೀತ, ಕೆಮ್ಮು, ಕಫ ಶೀಘ್ರವೇ ಗುಣಮುಖ ಆಗುತ್ತವೆ.
ಚರ್ಮವ್ಯಾಧಿಗೂ ಕಲಿಸಲಿದೆ ಬುದ್ಧಿ: ಹೌದು, ದೊಡ್ಡಪತ್ರೆ ಎಲೆ ಕೆಲವು ಚರ್ಮ ರೋಗ ನಿವಾರಣೆ ಔಷಧಿಯಾಗಿಯೂ ಬಳಕೆ ಆಗುತ್ತದೆ. ಸ್ವಚ್ಛತೆಯ ಕೊರತೆಯಿಂದ ಮಕ್ಕಳು ಅಥವಾ ಮನೆಯ ಮಂದಿಯಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ತುರಿಕೆ, ಕಜ್ಜಿ ಹಾಗೂ ಬೇಸಿಗೆಯಲ್ಲಿ ಮಕ್ಕಳಿಗೆ ಕಾಣಿಸಿಕೊಳ್ಳುವ ಬೆವರುಸಾಲೆ (ಸೆಖೆಗುಳ್ಳೆ) ಕಾಣಿಸಿಕೊಂಡ ಸ್ಥಳಕ್ಕೆ ಈ ದೊಡ್ಡಪತ್ರೆ ಎಲೆಯ ರಸ ಹಚ್ಚಿಕೊಳ್ಳಬೇಕು. ಜೊತೆಗೆ, ಸಾಂಬ್ರಾಣಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನಾರಿನಾಂಶ ಹಾಗೂ ಕಬ್ಬಿಣಾಂಶಗಳೂ ದೇಹಕ್ಕೆ ಲಭ್ಯವಾಗಲಿವೆ.