ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಮಕ್ಕಳಿಗೆ ಸಾಮಾನ್ಯ ವ್ಯವಹಾರದ ಜ್ಞಾನ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಆತ್ಮಸ್ಥೈರ್ಯ ವೃದ್ಧಿಗೆ ಈ ಮಕ್ಕಳ ಸಂತೆ, ಮೆಟ್ರಿಕ್ ಮೇಳ ಸಹಕಾರಿಯಾಗಲಿದೆ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ ಹೇಳಿದರು.
ಅವರು ಸಮೀಪದ ಅಡರಕಟ್ಟಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 2024-25ನೇ ಸಾಲಿನ ಮಕ್ಕಳ ಸಂತೆ ಅಥವಾ ಮೆಟ್ರಿಕ್ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದು ನಮ್ಮ ಪಠ್ಯಕ್ಕೆ ಹತ್ತಿರವಾಗಿದೆ. ಸುಲಭವಾಗಿ ಅರ್ಥವಾಗುತ್ತದೆ. ಶಾಲೆಯಲ್ಲಿ ಕಲಿಯುವ ಗಣಿತದ ಜತೆಗೆ ಮಕ್ಕಳಿಗೆ ಬದುಕು ನಡೆಸಲು ಅಗತ್ಯವಾದ ವ್ಯವಹಾರಿಕ ಗಣಿತ ತಿಳಿಯಲು ಮೆಟ್ರಿಕ್ ಮೇಳಗಳು ಸಹಕಾರಿಯಾಗಿವೆ. ದಿನನಿತ್ಯದಲ್ಲಿ ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಳ್ಳುವ ಮಕ್ಕಳಲ್ಲಿ ವ್ಯಾಪಾರದ ಮನೋಭಾವನೆ ಅರ್ಥ ಮಾಡಿಕೊಡುವದರಲ್ಲಿ ಮಕ್ಕಳ ಸಂತೆ ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಜಯಶ್ರೀ ಭಂಗಿ, ಮುಖ್ಯ ಶಿಕ್ಷಕಿ ಎಸ್.ಹೆಚ್. ಉಮಚಗಿ, ಸಿಆರ್ಪಿ ಶಿವಾನಂದ ಅಸುಂಡಿ, ಪ್ರಧಾನ ಕಾರ್ಯದರ್ಶಿ ಚಂದ್ರು ನೇಕಾರ, ಬಿ.ಬಿ. ಯತ್ನಳ್ಳಿ, ಎಲ್.ಎನ್. ನಂದೆಣ್ಣವರ, ಡಿ.ಡಿ. ಲಮಾಣಿ, ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಎಸ್. ಹಿರೇಮಠ, ಮಾಂತೇಶ ಹವಳದ, ರವಿಕುಮಾರ ದೇವರಮನಿ, ಮೌನೇಶ ಶಿರಹಟ್ಟಿ ಹಾಗೂ ಶಾಲಾ ಸಿಬ್ಬಂದಿಗಳು, ರಂಭಾಪುರಿ ಪ್ರೌಢಶಾಲೆಯ ಪ್ರಧಾನ ಗುರುಮತೆಯರು, ಎಸ್ಡಿಎಂಸಿ ಸದಸ್ಯರು, ಊರಿನ ಗಣ್ಯರು, ತಾಯಂದಿರು, ಮಕ್ಕಳು ಹಾಜರಿದ್ದರು.
ಶಾಲೆಯ 1ರಿಂದ 7ನೇ ವರ್ಗದಲ್ಲಿ ಕಲಿಯುತ್ತಿರುವ 200 ಮಕ್ಕಳ ಪೈಕಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂತೆಯಲ್ಲಿ ಪಾಲ್ಗೊಂಡು ವ್ಯಾಪಾರ-ವಹಿವಾಟು ನಡೆಸಿದರು. ಮಕ್ಕಳು ತರಕಾರಿ, ಕಿರಾಣಿ, ಆಟಿಕೆ, ಸಿದ್ಧ ಉಡುಪುಗಳನ್ನು ಸಂತೆಯಲ್ಲಿ ವ್ಯಾಪಾರಸ್ಥರು ಮಾರಾಟ ಮಾಡುವಂತೆ ಮಾಡಿದ್ದು ವಿಶೇಷವಾಗಿತ್ತು. ಗ್ರಾಮದ ನಿವಾಸಿಗಳು ಸಂತೆಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಮೆಟ್ರೀಕ್ ಮೇಳದಲ್ಲಿ ಮಕ್ಕಳು ವಿವಿಧ ವಸ್ತುಗಳ ವ್ಯಾಪಾರ ನಿರ್ವಹಿಸಿದರೆ, ಗ್ರಾಹಕರಾಗಿ ಪಾಲಕರು, ಸಾರ್ವಜನಿಕರು, ಶಿಕ್ಷಕರು ಪಾಲ್ಗೊಂಡರು.