ವಿಜಯಸಾಕ್ಷಿ ಸುದ್ದಿ, ರೋಣ: ಐತಿಹಾಸಿಕ ಮೊಹರಂ ಆಚರಣೆಗೆ ಹೆಸರುವಾಸಿಯಾದ ರೋಣ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಅಲೈದೇವರು ನುಡಿದ ಭವಿಷ್ಯವಾಣಿ ಈ ಬಾರಿ ರಾಜಕೀಯ ಹಾಗೂ ಮಳೆಯ ಕುರಿತ ಚರ್ಚೆಗೆ ಕಾರಣವಾಗಿದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಮೊಹರಂ ಆಚರಣೆ ಶಾಂತಿಯುತವಾಗಿ ಸಂಪನ್ನಗೊಂಡಿತು.
ಐತಿಹಾಸಿಕ ಮೊಹರಂ ಆಚರಣೆಗೆ ಹೆಸರುವಾಸಿಯಾದ ರೋಣ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಅಲೈದೇವರು ನುಡಿದ ಭವಿಷ್ಯವಾಣಿ ಈ ಬಾರಿ ರಾಜಕೀಯ ಹಾಗೂ ಮಳೆಯ ಕುರಿತ ಚರ್ಚೆಗೆ ಕಾರಣವಾಗಿದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಮೊಹರಂ ಆಚರಣೆ ಶಾಂತಿಯುತವಾಗಿ ಸಂಪನ್ನಗೊಂಡಿತು.
ಮೊಹರಂ ಹಬ್ಬದ ಕೊನೆಯ ದಿನ ದೇವರು ಹೊಳೆಗೆ ತೆರಳುವ ವೇಳೆ ಗ್ರಾಮದ ಎರಡು ಮಸೀದಿಗಳ ಅಲೈದೇವರುಗಳು ಸಾಂಕೇತಿಕವಾಗಿ ಭವಿಷ್ಯ ನುಡಿದವು. ಸಣ್ಣ ಮಸೀದಿಯ ದೊಡ್ಡದೇವರು ಕಮಲದ ಚಿಹ್ನೆ ಪ್ರದರ್ಶಿಸಿದರೆ, ದೊಡ್ಡ ಮಸೀದಿಯ ದೊಡ್ಡದೇವರು ಮೊದಲು ಕಮಲ, ಬಳಿಕ ಹಸ್ತದ ಚಿಹ್ನೆ ತೋರಿಸಿ ಉತ್ತತ್ತಿ ಎಸೆದಿರುವುದು ಭಕ್ತರಲ್ಲಿ ಕುತೂಹಲ ಮೂಡಿಸಿತು.
ಗ್ರಾಮದ ಹಿರಿಯರ ಪ್ರಕಾರ, ಮಾರನಬಸರಿಯ ಅಲೈದೇವರುಗಳು ಈ ಹಿಂದೆ ನುಡಿದ ಹಲವು ರಾಜಕೀಯ ಭವಿಷ್ಯಗಳು ನಿಜವಾಗಿವೆ ಎಂಬ ನಂಬಿಕೆ ಇದೆ. ಈ ಬಾರಿ ನೀಡಿದ ಸಂಕೇತಗಳನ್ನು ಭಕ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚರಿಕೆಯಿಂದ ಆಡಳಿತ ನಡೆಸಬೇಕೆಂಬ ಸಂದೇಶವೆಂದು ವಿಶ್ಲೇಷಿಸುತ್ತಿದ್ದಾರೆ.
ಇದೇ ವೇಳೆ, ಈ ವರ್ಷದ ಮುಂಗಾರು ಮಳೆ ಕಡಿಮೆ ಪ್ರಮಾಣದಲ್ಲಿ ಸುರಿಯಲಿದ್ದು, ಹಿಂಗಾರು ಸ್ವಲ್ಪ ಉತ್ತಮವಾಗಲಿದೆ ಎಂದು ಅಲೈದೇವರು ಭವಿಷ್ಯ ನುಡಿದವು. ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವುದಿಲ್ಲ ಎಂಬ ಸಂಕೇತವೂ ವ್ಯಕ್ತವಾಯಿತು.
ಮೊಹರಂ ಅಂಗವಾಗಿ ಕತ್ತಲ್ ರಾತ್ರಿ ಹಾಗೂ ದೇವರು ಹೊಳೆಗೆ ತೆರಳುವ ದಿನ ಸಾವಿರಾರು ಭಕ್ತರು ಮಸೀದಿಗಳಿಗೆ ಭೇಟಿ ನೀಡಿ ಸಕ್ಕರೆ ನೈವೇದ್ಯ ಅರ್ಪಿಸಿದರು. ನೂರಾರು ಭಕ್ತರು ದೀಡ ನಮಸ್ಕಾರ, ಉರುಳು ಸೇವೆ ನೆರವೇರಿಸಿ ಹರಕೆ ತೀರಿಸಿದರು. ಮೂರು ದಿನಗಳ ಕಾಲ ಗೀಗಿ ಪದಗಳು, ಧಾರ್ಮಿಕ ಆಚರಣೆಗಳು ಹಾಗೂ ಹಿಂದೂ–ಮುಸ್ಲಿಂ ಸೌಹಾರ್ದದ ವಾತಾವರಣದಲ್ಲಿ ಐತಿಹಾಸಿಕ ಮೊಹರಂ ಹಬ್ಬ ಸಂಪನ್ನಗೊಂಡಿತು.
ಸಾಂಕೇತಿಕ ಭವಿಷ್ಯವಾಣಿ
“ಮುಂಗಾರು ಮಳೆ ಕಡಿಮೆ, ಹಿಂಗಾರು ಸ್ವಲ್ಪ ಉತ್ತಮ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚರಿಕೆಯಿಂದ ಆಡಳಿತ ನಡೆಸಬೇಕು ಎಂಬ ಸಂಕೇತವನ್ನು ಅಲೈದೇವರು ನೀಡಿದ್ದಾರೆ ಎಂದು ಭಕ್ತರು ಹಾಗೂ ಗ್ರಾಮದ ಹಿರಿಯರು ವಿಶ್ಲೇಷಿಸಿದರು.”



