ವಿಜಯಸಾಕ್ಷಿ ಸುದ್ದಿ, ಗದಗ: ಸಿರಿಧಾನ್ಯಗಳು ಪೌಷ್ಠಿಕಾಂಶಗಳ ಕಣಜಗಳಾಗಿವೆ. ಜೀವಿಗಳ ಸದೃಢ ಆರೋಗ್ಯಕ್ಕೆ ಬೇಕಾಗುವ ಪೌಷ್ಠಿಕ ಜೀವಸತ್ವಗಳು ಈ ಧಾನ್ಯಗಳಲ್ಲಿವೆ. ನಮ್ಮ ಆಹಾರ ಪದ್ಧತಿಯಲ್ಲಿ ಬಹು ಉಪಯೋಗಿ ಆದ ಸಿರಿಧಾನ್ಯಗಳು ಪುರಾತನ ಧಾನ್ಯಗಳಾಗಿದ್ದು, ನಮ್ಮ ಆರೋಗ್ಯಕ್ಕೆ ಸಂಜೀವಿನಿಯಾಗಿವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ದಿನೇಶ ಎಂ ಹೇಳಿದರು.
ಅವರು ಗದುಗಿನ ಅಡವೀಂದ್ರ ಸ್ವಾಮಿ ಮಠದಲ್ಲಿ ಜರುಗಿದ 331ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಮಹತ್ವ ವಿಷಯವಾಗಿ ಉಪನ್ಯಾಸ ನೀಡಿ ಮಾತನಾಡಿದರು.
ಸಿರಿಧಾನ್ಯಗಳಲ್ಲಿ ಅಪಾರವಾದ ಆರೋಗ್ಯಪುಷ್ಟಿ ಇರುವುದರಿಂದ ಇದನ್ನು ಸಿರಿಧಾನ್ಯವೆಂದು ಕರೆಯುತ್ತೇವೆ. ಸಿರಿ ಎಂದರೆ ಸಂಪತ್ತು ಧಾನ್ಯ ಎಂದರೆ ಕಾಳುಗಳು. ಪೌಷ್ಠಿಕ ಅಂಶಗಳ ಸಂಪತ್ತಿನಿಂದ ತುಂಬಿರುವ ಕಾಳುಗಳು ಸಿರಿಧಾನ್ಯವಾಗಿದ್ದು, ಇವುಗಳ ಸೇವನೆ ಉತ್ತಮ ಆರೋಗ್ಯ, ಸದೃಢತೆ ಒದಗಿಸುತ್ತದೆ ಎಂಬುದು ಸಂಶೋಧನೆಗಳಿಂದಲೂ ತಿಳಿದುಬಂದಿದೆ ಎಂದರು.
ಸನ್ಮಾನಿತರಾಗಿ ಮಾತನಾಡಿದ ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ, ಜನಪದ ಕಲೆ ಒಂದು ವಿಶಿಷ್ಠ ಕಲೆ ಹಾಗೂ ಬಹು ಗತ್ತಿನ ಕಲೆಯಾಗಿದೆ. ಜನಪದರು ತಮ್ಮ ಬದುಕಿನ ಅನುಭವಗಳನ್ನು ಹಾಡಿನ ರೂಪದಲ್ಲಿ ರಚಿಸಿ ಹಾಡಿದರು. ಸಿರಿಧಾನ್ಯಗಳ ಕುರಿತಾಗಿಯೂ ಜನಪದಲ್ಲಿ ಉಲ್ಲೇಖವಿದೆ ಎಂದರು.
ಇದೇ ಸಂದರ್ಭದಲ್ಲಿ ಗದುಗಿನ ರಾಣಿ ಚನ್ನಮ್ಮ ಸೌಹಾರ್ದ ಪತ್ತಿನ ಸಂಘದ ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸಮ್ಮುಖ ವಹಿಸಿ ಮಾತನಾಡಿದ ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ನಮ್ಮ ಹಿರಿಯರು ಬಳಸುವ ಆಹಾರಗಳಾದ ರಾಗಿ, ಜೋಳ, ಸಜ್ಜಿ, ನವಣೆ, ಸಾಮೆ, ಊದಲ ಮುಂದಾವುಗಳು ಸಿರಿಧಾನ್ಯಗಳಾಗಿದ್ದು ಇವುಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಅಡುಗೆಯೂ ರುಚಿಕಟ್ಟಾಗಿರುತ್ತದೆ. ಹೀಗಾಗಿ ಎಲ್ಲರೂ ಸಿರಿಧಾನ್ಯವನ್ನು ಬಳಸಬೇಕೆಂದರು.
ಅಧ್ಯಕ್ಷತೆಯನ್ನು ಶಿವಾನುಭವ ಸಮಿತಿಯ ಅಧ್ಯಕ್ಷ ಎಸ್.ಕೆ. ನಾಲತ್ವಾಡಮಠ ವಹಿಸಿದ್ದರು. ಪ್ರಸಾದ ಸೇವೆ ವಹಿಸಿದ್ದ ಪ್ರಮೀಳಾದೇವಿ ಬಳಿಗಾರ, ಎಂ.ಎಂ. ಜೋಗಿನ, ಶೇಖರಪ್ಪ ಹನಮನಾಳ, ಚನ್ನಬಸವ ಕಾಳಗಿ, ಸಿ.ಬಿ. ಮಾಳಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಿದ್ಧಣ್ಣ ಜವಳಿ ಪ್ರಾರ್ಥಿಸಿದರು, ಪ್ರಕಾಶ ಬಂಡಿ ಸ್ವಾಗತಿಸಿದರು, ಯು.ಆರ್. ಭೂಸನೂರಮಠ ನಿರೂಪಿಸಿದರು. ಬಿ.ಬಿ. ತೋಟಗೇರ ವಂದಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದುಗಿನ ರಾಣಿ ಚನ್ನಮ್ಮ ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷ ಡಾ. ಎಸ್.ಕೆ. ಮ್ಯಾಗೇರಿ ಮಾತನಾಡಿ, ಸಿರಿಧಾನ್ಯಗಳು ಆರೋಗ್ಯಪೂರ್ಣ ಆಹಾರ ಪದಾರ್ಥಗಳು. ಮನುಷ್ಯ ಇಂದು ಬಾಯಿ ರುಚಿಗಾಗಿ ಕುರುಕಲು ತಿಂಡಿಗಳತ್ತ ಆಕರ್ಷಿತನಾಗಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕ. ಪ್ರತಿಯೊಬ್ಬರೂ ಸಿರಿಧಾನ್ಯಗಳ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.



