ವಿಜಯಸಾಕ್ಷಿ ಸುದ್ದಿ, ಗದಗ
21ನೇ ಶತಮಾನಕ್ಕೆ ಪಾದಾರ್ಪಣೆ ಮಾಡಿದ್ದರೂ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದೆ. ಮೇಲು ಕೀಳೆಂಬ ಬೇಧ ಭಾವ ತಾಂಡವಾಡುತ್ತಿದೆ.
ಈ ನಡುವೆ ಅಸ್ಪೃಶ್ಯತೆ ನಿವಾರಣೆಗೆ ಜಿಲ್ಲೆಯ ಮುಂಡರಗಿ ತಾಲೂಕು ತಹಶೀಲ್ದಾರ ಆಶಪ್ಪ ಪೂಜಾರ ಅವರು ಸ್ವತಃ ಪರಿಶಿಷ್ಟ ಜಾತಿ ಜನಾಂಗದವರು ಕುಡಿದ ಚಹಾ ಕಪ್ಪನ್ನು(ಗ್ಲಾಸ್) ತೊಳೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದು, ತಹಶೀಲ್ದಾರ್ ರ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ವಿಷಯ ತಿಳಿದ ಆಶಪ್ಪ ಪೂಜಾರ ಅವರು ಗುರುವಾರ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿರುವ ಸವರ್ಣಿಯರಿಗೆ ತಿಳುವಳಿಕೆ ನೀಡಿದರು.
ಹಾರೋಗೇರಿ ಗ್ರಾಮದಲ್ಲಿ ಬಹಳ ದಿನಗಳ ಹಿಂದೆ ದಲಿತರಿಗೆ ಚಹಾ ಅಂಗಡಿ ಒಳಗೆ ಪ್ರವೇಶ ಹಾಗೂ ಕ್ಷೌರ ಮಾಡುವುದನ್ನು ನಿಷೇಧಿಸಲಾಗಿತ್ತು. ಪರಿಶಿಷ್ಟ ಜಾತಿಯವರ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ ಸರ್ವರ್ಣಿಯರು ಊರಲ್ಲಿರುವ ಚಹಾ ಅಂಗಡಿಗಳನ್ನು ಬಂದ್ ಮಾಡುತ್ತಿದ್ದರು.
ಹೀಗಾಗಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ತಹಶೀಲ್ದಾರ್ ಆಶಪ್ಪ ಪೂಜಾರಿ, ಸಿಪಿಐ ಸುಧೀರ್ ಕುಮಾರ್ ಬೆಂಕಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಅವರು ಜಾಗೃತಿ ಸಭೆ ನಡೆಸಿ, ಗ್ರಾಮಸ್ಥರೊಂದಿಗೆ ಚಹಾದ ಅಂಗಡಿಗೆ ಹೋಗಿ ಚಹಾ ಗ್ಲಾಸ್ ತೊಳೆಯುವ ಮೂಲಕ ಜಾಗೃತಿ ಮೂಡಿಸಿದರಲ್ಲದೇ, ಮತ್ತೊಬ್ಬರಿಗೆ ಮಾದರಿಯಾದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಎಂ.ಎ.ನದಾಫ್, ಹಾರೋಗೇರಿ ಗ್ರಾಪಂ ಪಿಡಿಒ ಮಹೇಶ್ ಅಲ್ಲಿಪೂರ ಅವರು ಇದ್ದರು.