ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಮಕರ ಸಂಕ್ರಾಂತಿಯಂದು ಪುಣ್ಯಕ್ಷೇತ್ರಗಳಲ್ಲಿ ಸ್ನಾನ ಮಾಡಬೇಕೆನ್ನುವ ಪ್ರತೀತಿ ಇರುವುದರಿಂದ ಅನೇಕ ಕ್ಷೇತ್ರಗಳಲ್ಲಿ ಜನರು ಈ ದಿನದಂದ ಪುಣ್ಯಸ್ನಾನಕ್ಕೆ ತೆರಳುತ್ತಾರೆ. ಅದೇ ರೀತಿ ಪಟ್ಟಣದ ಹೊರವಲಯದಲ್ಲಿರುವ ಅಗಸ್ತ್ಯ ತೀರ್ಥ ಕ್ಷೇತ್ರವು ಪುರಾಣ ಮಹತ್ವದ್ದಾಗಿದ್ದು, ಇಲ್ಲಿಯೂ ಸಹ ಸ್ನಾನ ಮಾಡಲೆಂದು ಮಕರ ಸಂಕ್ರಾಂತಿ ದಿವಸ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಮಕರ ಸಂಕ್ರಾಂತಿಯಂದು ಇಲ್ಲಿನ ಅಗಸ್ತ್ಯ ತೀರ್ಥದ ಬಾವಿಗಳಲ್ಲಿ ಜನರು ಪುಣ್ಯಸ್ನಾನ ಮಾಡಿ ಪುನೀತರಾದರು. ಈ ಕ್ಷೇತ್ರದ ಜಾತ್ರೆಯು ಸಹ ಮಂಗಳವಾರ ಮತ್ತು ಬುಧವಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಂಕ್ರಾಂತಿಯ ಪುಣ್ಯಸ್ನಾನ, ಪುಣ್ಯಕ್ಷೇತ್ರ ದರ್ಶನಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಆಗಮಿಸಿ ಪುಣ್ಯ ಸ್ನಾನ ಮಾಡಿದರು.
ಅಗಸ್ತ್ಯ ತೀರ್ಥದ ಈ ತೀರ್ಥಬಾವಿಗಳು ಪವಿತ್ರವಾಗಿದ್ದು, ಹಿಂದೆ ಶವ ಸಂಸ್ಕಾರದ ಅಸ್ಥಿಯನ್ನು ಬಿಡಲು ದೂರದ ಪ್ರದೇಶಗಳಿಂದ ಬರುತ್ತಿದ್ದರೆಂದು ಹಾಗೂ ಇಲ್ಲಿ ಸ್ನಾನ ಮಾಡುವುದರಿಂದ ರೋಗ-ರುಜಿನಗಳು ಮಾಯವಾಗಿ, ಪಾಪಕರ್ಮಗಳು ಕಳೆದು ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿಯಿದೆ. ಇಲ್ಲಿನ ಅಕ್ಕತಂಗಿಯರ ಬಾವಿ ಎಂದು ಕರೆಯಲ್ಪಡುವ ಶಿಥಿಲಗೊಂಡಿರುವ ಇದೇ ಬಾವಿಗೆ ಸಂಕ್ರಮಣದಂದು ಪುರಸಭೆಯವರು ವರ್ಷಕ್ಕೊಮ್ಮೆ ನೀರು ಬಿಟ್ಟು ಸ್ನಾನ ಮಾಡಲು ಅನುಕೂಲ ಮಾಡಿಕೊಡುತ್ತಿದ್ದಾರೆ.
ಪಟ್ಟಣ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರು ಸೋಮವಾರ ಮುಂಜಾನೆಯಿಂದಲೇ ಈ ಕ್ಷೇತ್ರದ ಬಾವಿಯಲ್ಲಿ ಪುಣ್ಯಸ್ನಾನ ಮಾಡಿ ಸ್ಥಳೀಯ ದೇವರಿಗೆ ಪೂಜೆ ಸಲ್ಲಿಸಿದರು.



