ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಸಾರ್ವಜನಿಕÀರಿಗೆ ಬೀದಿ ನಾಯಿಗಳಿಂದ ಉಪಟಳ ಹೆಚ್ಚಾಗಿದ್ದು, ನಗರಸಭೆಗೆ ಬಹಳಷ್ಟು ದೂರುಗಳು ಸ್ವೀಕೃತವಾದ ಕಾರಣ, ಗದಗ-ಬೆಟಗೇರಿ ನಗರಸಭೆ ವತಿಯಿಂದ ಪ್ರಾಣಿ ಜನನ ನಿಯಂತ್ರಣ ಕಾಯ್ದೆ-2023ರ ಪ್ರಕಾರ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ (ಎಬಿಸಿ) ಹಾಗೂ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ (ಎಆರ್ವಿ) ಕಾರ್ಯಕ್ರಮ ಅನುಷ್ಠಾನ ಕಾರ್ಯ ಹಮ್ಮಿಕೊಳ್ಳ್ಳಲಾಯಿತು.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ 17, 18 ಜವಳಗಲ್ಲಿ ಮುಖ್ಯರಸ್ತೆ ಹಾಗೂ ಮೀನಿನ ಮಾರುಕಟ್ಟೆ ಭಾಗದಲ್ಲಿ ಬೀದಿ ನಾಯಿಗಳನ್ನು ಹಿಡಿದು ಕಾರ್ಯಾಚರಣೆ ಪ್ರಾರಭಿಸಲಾಯಿತು. 1ನೇ ದಿನಕ್ಕೆ ಒಟ್ಟು 30 ಬೀದಿ ನಾಯಿಗಳನ್ನು ಹಿಡಿದು ಚಿಕಿತ್ಸಾ ಕೇಂದ್ರಕ್ಕೆ ಸಾಗಿಸಲಾಯಿತು.
ಪೌರಾಯುಕ್ತರಾದ ಮಹೇಶ ಪೋತದಾರ ಸದರಿ ಕಾರ್ಯಕ್ಕೆ ಸಾರ್ವಜನಿಕರೆಲ್ಲರೂ ಸಹಕಾರ ನೀಡುವಂತೆ ಕೋರಿದರು.
ವಾರ್ಡ ನಂ.17ರ ಸದಸ್ಯರಾದ ಆಸ್ಮಾ ಮುನ್ನಾಸಾಬ ರೇಶ್ಮಿ ಈ ಸಂದರ್ಭದಲ್ಲಿ ಮಾತನಾಡಿ, ಬಹಳಷ್ಟು ಸಾರ್ವಜನಿಕರು ರಾತಿ ವೇಳೆಯಲ್ಲಿ ಬೀದಿನಾಯಿಗಳ ಉಪಟಳದಿಂದ ತೊಂದರೆ ಅನುಭವಿಸುತ್ತಿದ್ದು, ನಗರಸಭೆಯ ವತಿಯಿಂದ ಹಮ್ಮಿಕೊಳ್ಳಲಾದ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ಕಾರ್ಯಾಚರಣೆಯಲ್ಲಿ ಬೀದಿ ನಾಯಿಗಳ (ಎಬಿಸಿ ಮತ್ತು ಎಆರ್ವಿ) ಕಾರ್ಯಕ್ರಮ ಅನುಷ್ಟಾನದ ಏಜನ್ಸಿದಾರರಾದ ಎನಿಮಲ್ ರೈಟ್ಸ್ ಫಂಡ್, ವಾರ್ಡ್ ನಂ.18ರ ಸದಸ್ಯರಾದ ಜೆ.ಆರ್. ನಮಾಜಿ, ಚಂದ್ರು ಕರಿಸೋಮನಗೌಡ್ರ ಹಾಗೂ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು(ಪರಿಸರ) ಆನಂದ ಬದಿ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಮಕಾನದಾರ, ದಫೆದಾರರಾದ ಕೆಂಚಪ್ಪ ಪೂಜಾರ, ಹೇಮೇಶ ಯಟ್ಟಿ ಹಾಗೂ ಇನ್ನಿತರ ಸ್ವಚ್ಛತಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.