ರಾಯಚೂರು: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿದೆ. ಪ್ರಯಾಗ್ರಾಜ್ನಲ್ಲಿ ಕಾಲ್ತುಳಿತದಲ್ಲಿ 30 ಭಕ್ತರು ಮೃತಪಟ್ಟಿದ್ದಾರೆ, 60 ಭಕ್ತರು ಗಾಯಗೊಂಡಿದ್ದಾರೆ.ಇನ್ನೂ ಈ ವಿಚಾರವಾಗಿ ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಪ್ರತಿಕ್ರಿಯೇ ನೀಡಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು, ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸದ್ಗತಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಅಂತ ಸಂತಾಪ ವ್ಯಕ್ತಪಡಿಸಿದರು. ಅಲ್ಲಿನ ಸರ್ಕಾರ ಸೂಕ್ತವಾಗಿ ತನಿಖೆ ನಡೆಸಿ, ಪರಿಹಾರದ ಜೊತೆಗೆ ಜಾಗೃತಿ ವಹಿಸಬೇಕು ಎಂದರು.
ಗಂಗಾ ಸ್ನಾನದಿಂದ ಬಡತನ ದೂರವಾಗಲ್ಲ ಎನ್ನುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಕುಂಭಮೇಳ ಧಾರ್ಮಿಕ ಶ್ರದ್ಧೆಯ ವಿಚಾರವಾಗಿದೆ. ರಾಜಕೀಯ ನಾಯಕರು ಇದನ್ನ ಟೀಕಿಸುವ ವಿಚಾರವಾಗಬಾರದು. ಗಂಗಾಸ್ನಾನದಿಂದ ಬಡತನ ನೀಗುತ್ತೆ ಅಂತ ಯಾರು ಹೇಳಿಲ್ಲ. ಗಂಗಾ ಸ್ನಾನ ಎನ್ನುವುದು ಒಂದು ಭಾವನೆಗೆ ಒಳಪಟ್ಟಿದ್ದು. ಪವಿತ್ರತೆಗೆ ಕಾರಣವಾಗುತ್ತೆ, ನಮ್ಮ ಪಾಪಗಳು ಪರಿಹಾರವಾಗುತ್ತೆ. ದೇಹ ಮತ್ತು ಮನಸ್ಸಿನ ಶುದ್ಧಿಯಾಗುತ್ತೆ ಎಂದು ತಿಳಿಸಿದರು.