ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ 33 ವರ್ಷಗಳಿಂದ ಆರ್ಯವೈಶ್ಯ ಸಮಾಜದ ಹಿರಿಯರು ಮಂತ್ರಾಲಯಕ್ಕೆ ಪಾದಯಾತ್ರೆ ಪ್ರಾರಂಭಿಸಿದ್ದು, ಈ ಪದ್ಧತಿ ಇಂದಿನವರೆಗೂ ಅದರ್ಶವಾಗಿದೆ. ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ, ಸಮಾಜದ ಹಲವಾರು ಹಿರಿಯರ ಮಾರ್ಗದರ್ಶನ ಹಾಗೂ ಯುವಕರ ಪ್ರಯತ್ನದ ಬಲವಾಗಿ ಸತತವಾಗಿ ಮಂತ್ರಾಲಯಕ್ಕೆ ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ ರಾಘವೇಂದ್ರ ಸ್ವಾಮಿಗಳ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ತನು-ಮನಗಳನ್ನು ವಿಶ್ರಾಂತಗೊಳಿಸುತ್ತಾ ದೇಹಕ್ಕೆ ನವಚೇತನ ನೀಡುವುದರೊಂದಿಗೆ ಸಂತೋಷವಾಗಿ ಇರುತ್ತಾರೆ ಎಂದು ಪಾದಯಾತ್ರೆ ಹಿರಿಯರಾದ ದಿಲೀಪ್ ಜೋಶಿ ಅಭಿಪ್ರಾಯಪಟ್ಟರು.
ಗದಗ ನಗರೇಶ್ವರ ದೇವಸ್ಥಾನದ ಅಧ್ಯಕ್ಷ ಎನ್. ರಾಮರಾವ್ ಪಾದಯಾತ್ರೆಗಳ ಬೀಳ್ಕೊಡುವ ಸಮಾರಂಭದಲ್ಲಿ ಶುಭ ಹಾರೈಸಿದರು. ಪಾದಯಾತ್ರೆ ಕಮಿಟಿಯ ರಾಘವೇಂದ್ರ ಕಾಲವಾಡ, ಕಾರ್ಯದರ್ಶಿಗಳಾದ ವೆಂಕಟೇಶ ಮುಂಡರಗಿ ಮಾತನಾಡಿದರು. ಪಾದಯಾತ್ರೆ ನಡುವೆ ವಿಶ್ರಾಂತ ಸಮಯದಲ್ಲಿ ಚೆನ್ನಯ್ಯ ಹಿರೇಮಠ ಕಳಸಾಪುರ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಶಾಖಾಮಠ ಶ್ರೀ ಸುಬುದೇಂದ್ರತೀರ್ಥ ಶ್ರೀಗಳ ಆಶೀರ್ವಾದದೊಂದಿಗೆ ಶೀಘ್ರದಲ್ಲಿ ಲೋಕಾರ್ಪಣೆ ಆಗಲಿದ್ದು, ಭಕ್ತರು ತನು-ಮನ-ಧನ ಸಹಾಯ ಮಾಡಬೇಕೆಂದು ಕೋರಿದರು.
ಮಂತ್ರಾಲಯಕ್ಕೆ ತೆರೆಳಿದ ಪಾದಯಾತ್ರೆಗಳು ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಮಾಡಿದ ನಂತರ ಪೀಠಾಧಿಪತಿಗಳಾದ ಸುಬುದೇಂದ್ರ ತೀರ್ಥ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಶ್ರೀಗಳು ಅತಿ ಶೀಘ್ರದಲ್ಲಿ ಗದಗ ಕಳಸಾಪುರದ ಮಂತ್ರಾಲಯ ಶಾಖಾ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಮಾಡುವುದಾಗಿ ತಿಳಿಸಿದರು.