ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಪಠ್ಯದ ಜೊತೆಗೆ ಜೀವನ ಮೌಲ್ಯಗಳ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಪ್ರೀತಿ ಗಳಿಸಿದ ಕನ್ನಡ ಶಿಕ್ಷಕ ಎಸ್.ಎಚ್. ಶೆಟ್ಟಿನಾಯಕರ ಅವರು ಈ ಶಾಲೆಯ ಆದರ್ಶ ಶಿಕ್ಷಕರಾಗಿದ್ದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಸಿ.ಸಿ. ಕುರಹಟ್ಟಿ ಹೇಳಿದರು.
ಲಕ್ಕುಂಡಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಸ್.ಎಚ್. ಶೆಟ್ಟಿನಾಯಕರವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿ, ಮುಖ್ಯೋಪಾಧ್ಯಾಯರಿಗೆ ಹೆಗಲಾಗಿ, ಗ್ರಾಮಸ್ಥರಿಗೆ ಆತ್ಮೀಯ ಸ್ನೇಹಿತರಾಗಿ, ಶಾಲಾ ಆಡಳಿತಕ್ಕೆ ಸಲಹೆಗಾರರಾಗಿ ಹಾಗೂ ಮಕ್ಕಳಿಗೆ ತಂದೆ-ತಾಯಿಯಂತೆ ಸೇವೆ ಸಲ್ಲಿಸಿದ ಅವರ 14 ವರ್ಷಗಳ ಸೇವೆ ಶಾಲೆಯ ಇತಿಹಾಸದಲ್ಲಿ ಸ್ಮರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಎನ್.ಸಿ. ಮುಕ್ಕಣ್ಣವರ ಮಾತನಾಡಿ, ವಿದ್ಯಾರ್ಥಿಗಳ ಹೃದಯ ಗೆದ್ದ ಶಿಕ್ಷಕರಾಗಿ ಶೆಟ್ಟಿನಾಯಕರ ಸೇವೆ ಸಾರ್ಥಕವಾಗಿದೆ. ಶಾಲೆಯ ಅಭಿವೃದ್ಧಿ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಅವರು ಸಲ್ಲಿಸಿದ ಕೊಡುಗೆ ಶ್ಲಾಘನೀಯ ಎಂದರು.
ನಿವೃತ್ತ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ, ಶಿಕ್ಷಣ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ಅದಕ್ಕೆ ಶೆಟ್ಟಿನಾಯಕರವರು ಹೊಸ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, “ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ” ಎಂಬ ಮಾತಿನಂತೆ ಶೆಟ್ಟಿನಾಯಕರವರು ತಮ್ಮ ಶಿಕ್ಷಕ ಸೇವೆಯ ಮೂಲಕ ಗುರುಗಳ ಮಹತ್ವವನ್ನು ಎತ್ತಿಹಿಡಿದಿದ್ದಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಎಚ್. ಶೆಟ್ಟಿನಾಯಕರ, ಗದಗ ತಾಲೂಕಿನ ಕೀರಿಟಗೇರಿಯಲ್ಲಿ ಆರಂಭವಾದ ತಮ್ಮ ಶಿಕ್ಷಕ ಜೀವನ ಲಕ್ಕುಂಡಿಯಲ್ಲಿ ಪೂರ್ಣಗೊಂಡಿದೆ. 39 ವರ್ಷಗಳ ಶಿಕ್ಷಕ ಸೇವೆ ಎಲ್ಲರ ಪ್ರೀತಿ, ವಿಶ್ವಾಸ ಹಾಗೂ ಸಹಕಾರದಿಂದ ಸಾರ್ಥಕವಾಗಿದೆ. ಕೀರಿಟಗೇರಿ ಹಾಗೂ ಲಕ್ಕುಂಡಿ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ನೀಡಿದ ಸಹಕಾರವನ್ನು ಜೀವನಪೂರ್ತಿ ಸ್ಮರಿಸುತ್ತೇನೆ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಮುಖ್ಯೋಪಾಧ್ಯಾಯಿನಿ ಜ್ಯೋತಿ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ವೀರಯ್ಯ ಗಂಧದ, ಎಸ್ಡಿಎಂಸಿ ಅಧ್ಯಕ್ಷ ರಮಜಾನಸಾಬ ತಹಶೀಲ್ದಾರ, ಅಶೋಕ ಬೂದಿಹಾಳ, ಮಲ್ಲಿಕಾರ್ಜುನ ಹಗರಿ, ಬಸವರಾಜ ಪುರದ, ಅಶೋಕ ಗದಗೀನ, ನಾಗಪ್ಪ ಕುಂಬಾರ, ಮಹಾಂತೇಶ ಕುಂಬಾರ, ಶ್ರೀಧರ ಮಲ್ಲಾಡದ, ಕೆ.ಎಂ. ವಡವಿ, ಟಿ.ಎಂ. ಶಿರಹಟ್ಟಿ, ಮಹೇಶಗೌಡ ಪಾಟೀಲ, ಶಿವಣ್ಣ ಕಟಕಟಿ, ವೀರೇಶ ಹಡಪದ, ಯಲ್ಲಪ್ಪಗೌಡ ಸಂಕನಗೌಡ, ಮಲ್ಲಪ್ಪ ದಂಡಿನ ಸೇರಿದಂತೆ ಶಿಕ್ಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶೋಭಾ ಪೂಜಾರ ಪ್ರಾರ್ಥಿಸಿದರು. ಕೀರ್ತಿ ಮ್ಯಾಗೇರಿ ಸ್ವಾಗತಿಸಿದರು. ವೈ.ವೈ. ಬೆಟಗೇರಿ ನಿರೂಪಿಸಿದರು. ಎಂ.ಎನ್. ಮುನಶಿ ವಂದಿಸಿದರು.
“ಪಠ್ಯದ ಜೊತೆಗೆ ಜೀವನ ಮೌಲ್ಯಗಳನ್ನು ಬೋಧಿಸಿ ವಿದ್ಯಾರ್ಥಿಗಳ ಮನ ಗೆದ್ದ ಶಿಕ್ಷಕ ಎಸ್.ಎಚ್. ಶೆಟ್ಟಿನಾಯಕರ ಸೇವೆ ಸದಾ ಸ್ಮರಣೀಯ.”
– ಸಿ.ಸಿ. ಕುರಹಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರು



