ನವದೆಹಲಿ:- ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ಪೂವರ್ ಲೇಡಿ’ ಎಂದು ಕರೆದಿದ್ದಕ್ಕಾಗಿ ಬಿಹಾರದ ಮುಜಾಫರ್ಪುರದಲ್ಲಿ ಪ್ರಕರಣ ದಾಖಲಾಗಿದ್ದು, ಹೀಗಾಗಿ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಂಕಷ್ಟ ಎದುರಾಗಿದೆ.
ಸುಧೀರ್ ಓಜಾ ಎಂಬ ವಕೀಲರು ಶನಿವಾರ ಸಿಜಿಎಂ ನ್ಯಾಯಾಲಯದಲ್ಲಿ ಈ ದೂರು ನೀಡಿದ್ದಾರೆ. ನ್ಯಾಯಾಲಯ ಅದನ್ನು ಅಂಗೀಕರಿಸಿದ್ದು, ಫೆಬ್ರವರಿ 10 ರಂದು ಪ್ರಕರಣದ ವಿಚಾರಣೆ ನಿಗದಿಪಡಿಸಿದೆ.
ದ್ರೌಪದಿ ಮುರ್ಮು ಅವರನ್ನು ಸೋನಿಯಾ ಗಾಂಧಿ ಅವಮಾನಿಸಿದ್ದಾರೆ ಎಂದು ಅರ್ಜಿದಾರ ಸುಧೀರ್ ಹೇಳಿದ್ದಾರೆ. ಬಜೆಟ್ ಅಧಿವೇಶನದ ವೇಳೆ ರಾಷ್ಟ್ರಪತಿ ಭಾಷಣದ ನಂತರ ಸೋನಿಯಾ ಗಾಂಧಿ ಅವರು ನೀಡಿದ ಹೇಳಿಕೆ ಅತ್ಯಂತ ಆಕ್ಷೇಪಾರ್ಹವಾಗಿದೆ. ರಾಷ್ಟ್ರಪತಿ ಮಹಿಳೆಯಾಗಿದ್ದಾರೆ ಮತ್ತು ಬುಡಕಟ್ಟು ಸಮುದಾಯದಿಂದ ಬಂದವರು. ಅವರ ವಿರುದ್ಧ ಈ ಹೇಳಿಕೆ ಆಕ್ಷೇಪಾರ್ಹ ಎಂದು ಓಜಾ ಪ್ರತಿಪಾದಿಸಿದ್ದಾರೆ.
ಇನ್ನೂ ಅರ್ಜಿದಾರರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಹ ಆರೋಪಿಗಳೆಂದು ಹೆಸರಿಸಿದ್ದಾರೆ ಮತ್ತು ಅವರ ವಿರುದ್ಧವೂ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.