ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಗುರುಗಳು ಮಾತ್ರವಲ್ಲದೇ ಅವರ ಪಾಲಕರೂ ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳ ಸೃಜನಶೀಲತೆಗೆ ಮತ್ತು ಪ್ರಗತಿಗೆ ಶಿಕ್ಷಣ ಅತೀ ಅವಶ್ಯ. ಅಲ್ಲದೆ ಮಕ್ಕಳೂ ಕೂಡ ತಮ್ಮ ಜೀವನದಲ್ಲಿ ಗುರುವಿನ ಸಹಕಾರದಿಂದ ಗುರಿ ಸೇರುವ ಪ್ರಯತ್ನದಲ್ಲಿ ಸದಾ ತೊಡಗಿರಬೇಕು ಎಂದು ಗದಗ ಜಿಲ್ಲಾ ಶಾಲಾ ಶಿಕ್ಷಣ ಉಪನಿರ್ದೇಶಕರಾದ ಆರ್.ಎಸ್. ಬುರಡಿ ಸಲಹೆ ನೀಡಿದರು.
ಅವರು ಬೆಟಗೇರಿಯ ಎಸ್.ಎಸ್.ಕೆ. ಶ್ರೀ ಜಗದಂಬಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಿಸ್ಸೆಸ್ ಲೀಲಾಬಾಯಿ ನಾರಾಯಣಸಾ ಬದಿ ಪ್ರೌಢಶಾಲೆ ಬೆಟಗೇರಿಯಲ್ಲಿ ಜರುಗಿದ 2024-2025ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾರಿತೋಷಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಗದುಗಿನ ಗಣ್ಯ ವ್ಯಾಪಾರಿಗಳು ಹುಲಕೋಟಿ ಎಜುಕೇಷನ್ ಸೊಸೈಟಿಯ ಪದವಿ ಕಾಲೇಜಿನ ಚೇರಮನ್ ರಾಮಚಂದ್ರಸಾ ಕೆ.ಹಬೀಬ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಪಾತ್ರ ಬಹುಮುಖ್ಯವಾಗಿದೆ. ಅವರೊಂದಿಗೆ ಮಕ್ಕಳು ಕೂಡ ಅದೇ ನಿಟ್ಟಿನಲ್ಲಿ ಗುರುವನ್ನು ಆದರದಿಂದ ಕಾಣಬೇಕು ಎಂದರಲ್ಲದೆ, ಪಠ್ಯ ವಿಷಯವಲ್ಲದೇ ಪಠ್ಯೇತರ ವಿಷಯಗಳಲ್ಲಿಯೂ ಕೂಡ ಮಕ್ಕಳು ಭಾಗವಹಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಚೇರಮನ್ ಜಿ.ವಿ. ಬಸವಾ, ವೈಸ್ ಚೇರಮನ್ ದತ್ತು ಉ.ಪವಾರ, ಎಸ್.ಎಸ್.ಕೆ. ತರುಣ ಸಂಘದ ಅಧ್ಯಕ್ಷ ಶ್ರೀಕಾಂತ ಬಿ.ರಾಯಬಾಗಿ, ಶ್ರೀ ಜಗದಂಬಾ ಮಹಿಳಾ ಮಂಡಳದ ಅಧ್ಯಕ್ಷೆ ಸರೋಜಾಬಾಯಿ ಎಚ್.ಕಬಾಡಿ, ಮುಖ್ಯೋಪಾಧ್ಯಾಯರಾದ ಎಸ್.ಡಿ. ಬೆನಕಲ್ ಹಾಗೂ ಸಿ.ಎಸ್. ಹವಳದ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಂಸ್ಥೆಯ ಚೇರಮನ್ ಜಿ.ವ್ಹಿ. ಬಸವಾ ಸ್ವಾಗತಿಸಿ ಪರಿಚಯಿಸಿದರು. ವೈಸ್ ಚೇರಮನ್ ದತ್ತು ಪವಾರ ಪ್ರಾಸ್ತಾವಿಕ ನ್ಮಡಿಗಳನ್ನಾಡಿದರು. ಎಸ್.ಡಿ. ಬೆನಕಲ್ ವಾರ್ಷಿಕ ವರದಿ ವಾಚನ ಮಾಡಿದರು. ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಹ ಶಿಕ್ಷಕಿ ಮಮತಾ ನಡುವಿನಮನಿ ಹಾಗೂ ಸವಿತಾ ಹುಲ್ಲಣ್ಣವರ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಪಾಟೀಲ ಮಾಲಾರ್ಪಣೆಯನ್ನು ಹಾಗೂ ಬಹುಮಾನ ವಿತರಣೆಯನ್ನು ಅಖಿಲಾ ಚುರ್ಚಪ್ಪನವರು ನಡೆಸಿಕೊಟ್ಟರು. ಆರ್.ಪಿ. ನದಾಫ್ ವಂದಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಕೆ. ಸಮಾಜ ಪಂಚ ಟ್ರಸ್ಟ ಕಮಿಟಿ, ತರುಣ ಸಂಘ, ಮಹಿಳಾ ಮಂಡಳ ಹಾಗೂ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದ ಲೋಕನಾಥ ಬಿ.ಕಬಾಡಿ ಮಾತನಾಡಿ, ಸಂಸ್ಥೆಯ ಏಳ್ಗೆಯಲ್ಲಿ ಶಿಕ್ಷಕ ವೃಂದದ ಹಾಗೂ ಸಮಾಜದ ದಾನಿಗಳ ಪಾತ್ರ ಬಹು ಮಹತ್ವದ್ದಾಗಿದೆ. ನಮ್ಮ ಶಾಲೆಯ ಮಕ್ಕಳು ಇತರೆ ಅನೇಕ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದು ಹೆಮ್ಮೆ ಮೂಡಿಸಿದೆ ಎಂದರು.


